Wednesday, April 4, 2012

ತಟ್ಟು ತಪ್ಪಾಳೆ ಕೆಟ್ಟ ಮಗು.....!






ಕಳೆದ ಕೆಲವುಗಳಿಂದ ನಾನು ಸುಮ್ಮನೆ ಉಳಿದು ಬಿಟ್ಟೆ. ಏನನ್ನು ಬರೆಯಬೇಕು ಎಂದು ಅನ್ನಿಸುತ್ತಿರಲಿಲ್ಲ. ಬರೆಯಲು ಏನೂ ಇರಲಿಲ್ಲ ಅಂತಾನೂ ಅಲ್ಲ. ಕೆಲವೊಮ್ಮೆ ನಮಗೆ ಏನನ್ನಾದರೂ ಮಾಡಬೇಕು ಎಂದು ಅನ್ನಿಸುವುದಿಲ್ಲ. ನನಗೆ ಆಗಿದ್ದು ಹಾಗೆ.
ನಾನು ಬೆಂಗಳೂರಿನಿಂದ ಹೊರಗಡೆ ಒಂದೆರಡು ದಿನ ಇದ್ದೆ. ನಂತರ ಬೆಂಗಳೂರಿಗೆ ಹಿಂತಿರುಗಿದ ಮೇಲೂ ಬೇಸರ.
ಒಂದೆಡೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಟಾಟೋಪ. ನಾನು ನ್ಯಾಯಾಲಯದಲ್ಲಿ ಇರುವ ಪ್ರಕರಣಗಳಿಂದ ಹೊರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಮಾಡುವುದಾಗಿ ವರಿಷ್ಠರು ಭರವಸೆ ನೀಡಿದ್ದರು, ಅದನ್ನು ಅವರು ಈಡೇರಿಸಬೇಕು ಎಂಬ ಒತ್ತಾಯ. ಇದಕ್ಕೆ ಪೂರಕವಾಗಿ ಹಲವು ಸಭೆ ಸಮಾರಂಭಗಳು. ಆ ಸಮಾರಂಭಗಳಲ್ಲಿ ಅವರ ಗುಣ ಗಾನ ಮಾಡುವ ಭಟ್ಟಂಗಿಗಳು.
ನಾನು ಬಹಳಷ್ಟು ವರ್ಷಗಳಿಂದ ನೋಡುತ್ತಲೇ ಬಂದಿರುವ ಯಡಿಯೂರಪ್ಪ, ಮುಗ್ದ ಮತ್ತು ದಡ್ಡ ಎಂಬುದು ನನ್ನ ನಂಬಿಕೆಯಾಗಿತ್ತು. ಸಾಧಾರಣವಾಗಿ ಗ್ರಾಮಾಂತರ ಪ್ರದೇಶಗಳಿಂದ ಬಂದವರಿಗೆ ಇಂತಹ ಹುಂಬತನ ಇರುತ್ತದೆ. ಅವರು ತಮ್ಮ ಮನಸ್ಸಿಗೆ ಅನ್ನಿಸಿದ್ದನ್ನು ಕದ್ದು ಮುಚ್ಚಿ ಇಟ್ಟುಕೊಳ್ಳಲಾರರು. ಹೋರಾಟಗಳಿಂದಲೇ ಬಂದ ಯಡಿಯೂರಪ್ಪನವರಲ್ಲಿ ಇಂತಹ ಹುಂಬತನ ಇದೆ ಎಂದು ನಾನು ನಂಬಿದ್ದೆ.
ಹುಂಬತನ ಅಂತಹ ದೊಡ್ಡ ದೊಷವಲ್ಲ. ಯಾಕೆಂದರೆ ಹುಂಬತನದ ಹಿಂದೆ ಕಪಟ ಇರುವುದಿಲ್ಲ. ಷಡ್ಯಂತ್ರ ಇರುವುದಿಲ್ಲ. ಮುಗ್ದವಾದ ಮನಸ್ಸುಗಳಲ್ಲಿ ಮಾತ್ರ ಹುಂಬತನ ಇರುತ್ತದೆ. ಆದ್ದರಿಂದ ಹುಂಬರು ಮತ್ತು ಮುಗ್ದರು ಅಪಾಯಕಾರಿಯಲ್ಲ. ಜೊತೆಗೆ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ನನಗೆ ಸಂತೋಷವಾಗಿದ್ದು ಅವರ ಬಗ್ಗೆ ಎಂದು ಹೇಳುವುದಕ್ಕಿಂತ ನಮ್ಮ ಡೆಮಾಕ್ರಸಿಯ ಬಗ್ಗೆ ನನಗೆ ಇನ್ನಷ್ಟು ಗೌರವ ಪ್ರೀತಿ ಉಂಟಾಗಿದ್ದು ನಿಜ.
ಯಾಕೆಂದರೆ ದೇವೇಗೌಡರು ಪ್ರಧಾನಿಯಾಗುವುದು ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಡೆಮಾಕ್ರಸಿಯ ಪವಾಡ ಎಂದು ನನಗೆ ಅನ್ನಿಸಿದ್ದುಂಟು. ಈಗಲೂ ಹಾಗೆ ಅನ್ನಿಸುತ್ತದೆ. ಗ್ರಾಮಾಂತರ ಪ್ರದೇಶದಿಂದ ಬಂದು ಇಂಗ್ಲೀಷ ಎಂಬ ಮಾಯಾಂಗನೆಯ ಸ್ಪರ್ಶವೂ ಇಲ್ಲದೇ ಎತ್ತರಕ್ಕೆ ಏರುವುದು ಸಾಮಾನ್ಯ ಸಾಧನೆಯಲ್ಲ.
ಆದರೆ ಈಗ ಯಡಿಯೂರಪ್ಪ ಅವರ ವರ್ತನೆಯನ್ನು ಗಮನಿಸಿದಾಗ ನನ್ನ ಮನಸ್ಸಿನಲ್ಲಿ ಚಿತ್ರವೊಂದು ಮೂಡುತ್ತದೆ. ಅದು ಮನೆಯ ಅಂಗಳದಲ್ಲಿ ಕುಳಿತ ಪುಟ್ಟ ಮಗುವಿನ ಚಿತ್ರ. ಮೈಮೇಲೆ ಬಟ್ಟೆಯೂ ಇಲ್ಲದೇ ಅಂಗಳದಲ್ಲಿ ಕುಳಿತ ಮಗು ಉಚ್ಚೆ ಕಕ್ಕಸು ಮಾಡಿಕೊಂಡಿದೆ. ಉಚ್ಚೆಯ ಜೊತೆಗೆ ಆಡುತ್ತ ಕಕ್ಕಸನ್ನು ಮೈ ಕೈಗೆ ಬಡಿದುಕೊಂಡು ಅಳುತ್ತಿರುವ ಮಗು.
ಈ ಮಗುವಿನ ಜಾಗದಲ್ಲಿ ನನಗೆ ಯಡಿಯೂರಪ್ಪ ಕಾಣುತ್ತಾರೆ. ಅವರು ಬೆತ್ತಲಾಗಿದ್ದಾರೆ. ಮೈ ಕೈಗೆ ಕಕ್ಕಸು ಮೆತ್ತಿಕೊಂಡಿದೆ. ಅವರು ಅಳುತ್ತಲೇ ಇದ್ದಾರೆ. ಆದರೆ ಅವರ ಅಳುವಿಗೆ ಸಾಂತ್ವನ ಹೇಳುವ ಅಮ್ಮ ಕಾಣುತ್ತಿಲ್ಲ. ಮೈ ಕೈ ತೊಳೆಸಿ ಹೊಸ ಬಟ್ಟೆ ಹಾಕಿ ಆಡಲು ಗೊಂಬೆಗಳನ್ನು ನೀಡಬೇಕಾದ ಅಮ್ಮ ನಾಪತ್ತೆ.
ಪುಟ್ಟ ಮಗುವಿಗೆ ಉಚ್ಚೆ ಮತ್ತು ಕಕ್ಕಸು ಹೊಲಸು ಎಂಬುದು ತಿಳಿದಿರುವುದಿಲ್ಲ ಕಕ್ಕಸಿನ ದುರ್ವಾಸನೆ ಮಗುವನ್ನು ವಿಚಲಿತವಗಿ ಮಾಡುವುದಿಲ್ಲ. ಕಕ್ಕಸನ್ನು ಮೈ ಕೈ ಗೆ ಬಡಿದುಕೊಂಡರೂ ಅದರ ಹೊಲಸಿನಿಂದ ಮಗುವಿಗೆ ತೊಂದರೆಯಾಗುತ್ತಿದ್ದರೂ ಅದರಿಂದ ಹೊರಕ್ಕೆ ಬರಬೇಕು ಎಂಬುದು ಅದಕ್ಕೆ ತಿಳಿಯದು.
ನನಗೆ ಈಗ ಮನೆಯ ಅಂಗಳದಲ್ಲಿ ಕುಳಿತ ಯಡಿಯೂರಪ್ಪ ಕಾಣುತ್ತಿದ್ದಾರೆ. ಅವರ ಮೈ ಮೇಲೂ ಬಟ್ಟೆಯಿಲ್ಲ. ಮೈ ಕೈ ರಾಡಿಯಾಗಿದೆ. ಅವರೂ ಅಳುತ್ತಿದ್ದಾರೆ ರಚ್ಚೆ ಹಿಡಿಯುತ್ತಿದ್ದಾರೆ. ಅದರೆ ಈ ಎರಡೂ ಚಿತ್ರಗಳಲ್ಲಿ ಇರುವ ವ್ಯತ್ಯಾಸ ಎಂದರೆ ಮಗಿವಿಗೆ ಇರುವ ಮುಗ್ದತೆ ಯಡಿಯೂರಪ್ಪ ಅವರಲ್ಲಿ ಇರುವುದು ಸಾಧ್ಯವಿಲ್ಲ. ಮಗುವಿನ ಅಳುವಿನ ಹಿಂದೆ ತಾಯಿಯ ಲಕ್ಶ್ಯ ಸೆಳೆಯುವ ಉದ್ದೇಶವಿದೆ. ಅದನ್ನು ಮೀರಿ ಮಗು ಏನನ್ನೂ ಬಯಸುವುದಿಲ್ಲ. ಆದರೆ ಅಳುತ್ತಿರುವ ಯಡಿಯೂರಪ್ಪ ಮಗುವಾಗಿ ದೊಡ್ದವರಾದವರು. ಹೀಗೆ ದೊಡ್ದವರಾಗುವ ಮೂಲಕ ಅವರು ಮುಗ್ದತೆಯನ್ನು ಕಳೆದುಕೊಂಡಿದ್ದಾರೆ. ಹಾಗೆ ಅವರಿಗೆ ತಾಯಿಯ ಲಕ್ಶ್ಯವನ್ನು ಸೆಳೆಯುವುದು ಮಾತ್ರ ಉದ್ದೇಶವಲ್ಲ. ಅಮ್ಮನನ್ನು ಹತ್ತಿರಕ್ಕೆ ಕರೆದು ಆಕೆಯ ಮೊಲೆ ಹಾಲು ಕುಡಿಯುವ ದೊಡ್ಡವರ ದುಷ್ಟ ಆಸೆಯೂ ಅವರ ಮನಸ್ಸಿನಲ್ಲಿ ಇರುವಂತೆ ನನಗೆ ಕಾಣುತ್ತದೆ. ಹಾಗೆ ದೊಡ್ದವನಾದವನು ಮೊಲೆಯ ಹಾಲನ್ನು ಹೀರಿ ತಾಯಿಯನ್ನೇ ಕೊಲ್ಲಲು ಯತ್ನ ನಡೆಸುವ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ.
ಯಡಿಯೂರಪ್ಪ ಅವರು ಮಾತನಾಡುವ ರೀತಿಯನ್ನು ಗಮನಿಸಿದರೆ ನಾನು ಮೇಲೆ ಹೇಳಿದ ಮಾತುಗಳಿಗೆ ಇನ್ನಷ್ಟು ಪುಷ್ಟಿ ದೊರಕುತ್ತದೆ.
ಅವರ ಹೇಳಿಕೆಗಳ ಹಿಂದಿನ ಮನಸ್ಥಿತಿಯನ್ನು ನೋಡಿ.
೧. ನನ್ನನ್ನು ಮುಖ್ಯಮಂತ್ರಿ ಮಾಡಬೇಕು ಅದು ನನ್ನ ಆಸ್ತಿ.
೨. ನನ್ನಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಅಧಿಕಾರ ನನ್ನ ಬಳಿಯೇ ಇರಬೇಕು.
೩. ನಾನೇ ಕರ್ನಾಟಕದ ಅಭಿವೃದ್ಧಿ. ನನ್ನಿಂದಲೇ ಅಭಿವೃದ್ಧಿ. ನಾನು ಅಭಿವೃದ್ಧಿಯಾದರೆ ಕರ್ನಾಟಕದ ಅಭಿವೃದ್ಧಿಯಾದಂತೆ.
೪. ಸದಾನಂದ ಗೌಡರನ್ನು ನಾನೇ ಮುಖ್ಯಮಂತ್ರಿ ಮಾಡಿದ್ದರಿಂದ ಅವರು ಮಾತುಕೊಟ್ಟಂತೆ ಮುಖ್ಯಮಂತ್ರಿ ಸ್ಥಾನವನ್ನು ನನಗೆ ಬಿಟ್ಟುಕೊಡಬೇಕು. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು.
ಅವರ ಮನಸ್ಥಿತಿಯಲ್ಲಿ ಪ್ರಧಾನ ಅಂಶ ಎಂದರೆ ನಾನು. ನನ್ನಿಂದಲೇ ಎಲ್ಲ ಎಂಬುದು. ಇದನ್ನು ಗಮನಿಸಿದಾಗ ಮೂರನೆಯ ದರ್ಜೆಯ ರಾಜಕಾರಣಿಯೊಬ್ಬ ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಇಂದರೆ ಇಂದಿರಾ ಎಂದು ಹೇಳಿದ ಮಾತು ನೆನಪಾಗುತ್ತದೆ. ಯಡಿಯೂರಪ್ಪ ಕೂಡ ಕರ್ನಾಟಕ ಎಂದರೆ ನಾನು, ನಾನು ಎಂದರೆ ಕರ್ನಾಟಕ ಎಂದು ಅಂದುಕೊಂಡಂತೆ ಅನ್ನಿಸುತ್ತದೆ. ದೇವಕಾಂತ್ ಬರೂವಾ ಇಂದಿರಾ ಎಂದರೆ ಇಂಡಿಯಾ ಎಂಬ ಮಾತನ್ನು ಹೇಳಿದಾಗ ಇಂದಿರಾ ಗಾಂಧಿ ಈ ಬಗ್ಗೆ ಸಣ್ಣ ಪ್ರತಿರೋಧವನ್ನೂ ವ್ಯಕ್ತಪಡಿಸಲಿಲ್ಲ. ಈಗ ಯಡಿಯೂರಪ್ಪ ಕೂಡ ತಾವೇ ಕರ್ನಾಟಕ ಎಂಬುದನ್ನು ನಂಬಿಕೊಂಡಂತಿದೆ. ಇದು ಹೇಗಿದೆ ಎಂದರೆ ಕೆಲವು ದೇವ ಮಾನವರು ಎಂದು ಹೇಳಿಕೊಂಡು ಜನರಿಗೆ ಮೋಸ ಮಾಡುವವರು ತಾವೇ ದೇವರು ಎಂದು ನಂಬಿಕೊಳ್ಳುವಂತೆ. ಹೀಗಾಗಿ ಯಡಿಯೂರಪ್ಪ ನಮ್ಮ ರಾಜಕಾರಣದ ದೇವ ಮಾನವ. ಹಾಗೆ ಅವರ ಭಟ್ಟಿಂಗಿತನಕ್ಕೆ ಮೆಚ್ಚಿರುವ ಕೆಲವು ದೈವ ಪುತ್ರರು. ದೈವತ್ವದ ಗುಣಗಳನ್ನು ಕಳೆದುಕೊಂಡ ಕೆಲವು ನಡೆದಾಡುವ ದೇವರುಗಳು ಅವರ ಈ ಭ್ರಮೆ ಎಂಬ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುತ್ತಿದ್ದಾರೆ. ಭ್ರಮೆಯ ಬೆಂಕಿ ಇನ್ನಷ್ಟು ಜ್ವಾಜಲ್ಯಮಾನವಾಗಿ ಉರಿಯುವಂತೆ ಮಾಡುತ್ತಿದ್ದಾರೆ.
ಯಡಿಯೂರಪ್ಪ ಈಗ ಬರಗಾಲದ ಪರಿಸ್ಥಿತಿಯನ್ನು ಅಧ್ಯಯನ ಮಾಡುವುದಕ್ಕೆ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸದಲ್ಲಿ ಅವರು ಮಾಡುತ್ತಿರುವ ಘನ ಕಾರ್ಯ ಎಂದರೆ ಅಧಿಕಾರಿಗಳ ಮೇಲೆ ಧಾಳಿ. ಮುಖ್ಯಮಂತ್ರಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಆದರೆ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳುತ್ತಿರುವ ಅವರು ಯಾವ ಸಂದೇಶವನ್ನು ನೀಡುತ್ತಿದ್ದಾರೆ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ. ಅವರು ಅಧಿಕಾರಿಗಳ ಮೇಲೆ ಧಾಳಿ ಮಾಡಿದರೂ ಅವರ ಗುರಿ ಸದಾನಂದ ಗೌಡರೇ ಎಂಬುದು ಸ್ಪಷ್ಟ.
ಸದಾನಂದ ಗೌಡರು ಮುಖ್ಯಮಂತ್ರಿಯಾದ ಮೇಲೆ ಒಬ್ಬರೆ ಒಬ್ಬ ಅಧಿಕಾರಿಯನ್ನು ಬದಲಿಸುವುದಕ್ಕೂ ಅವಕಾಶ ನೀಡದೇ ತಡೆ ಹಾಕುತ್ತಿರುವ ಯಡಿಯೂರಪ್ಪ ತಮ್ಮ ವಂದಿ ಮಾಗದರೇ ಮುಂದುವರಿಯುವಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕೆಲವು ಅಪವಾದಗಳು ಇರಬಹುದಾದರೂ ಪ್ರಮುಖ ಸ್ಥಾನಗಳಲ್ಲಿ ಇರುವವರು ಯಡಿಯೂರಪ್ಪನವರಿಗೆ ಬೇಕಾದ ಅಧಿಕಾರಿಗಳೇ. ಹೀಗಿರುವಾಗ ಅವರು ಬೈಯುತ್ತಿರುವ ಅಧಿಕಾರಿಗಳು ಯಾರು ? ಈ ಅಧಿಕಾರಿಗಳ ವೈಫಲ್ಯ ಎಂದರೆ ಅವರ ಆಪ್ತ ಅಧಿಕಾರಿಗಳ ವೈಫಲ್ಯವೇ ಅಲ್ಲವೆ ? ಅಂದರೆ ಅಪ್ರತ್ಯಕ್ಷವಾಗಿ ಯಡಿಯೂರಪ್ಪನವರ ವಿಫಲ್ಯವೇ ಅಲ್ಲವೆ ?
ಪ್ರಾಯಶಃ ಯಡಿಯೂರಪ್ಪ ಇದನ್ನೆಲ್ಲ ಅರ್ಥ ಮಾಡಿಕೊಂಡಿರಲಾರರು. ಮತ್ತೆ ಮುಖ್ಯಮಂತ್ರಿಯಾಗಲು ಎಲ್ಲ ರೀತಿಯ ಯತ್ನಗಳನ್ನು ನಡೆಸುತ್ತಿರುವ ಅವರಿಗೆ ಇಂತಹ ಸೂಕ್ಷ್ಮಗಳೂ ಅರ್ಥವಾಗಿರಲಾರದು. ನಾನು ಈ ಮೊದಲು ಹೇಳಿದಂತೆ ಯಡಿಯೂರಪ್ಪ ಮನೆಯ ಅಂಗಳದಲ್ಲಿ ಕಕ್ಕಸು ಉಚ್ಚೆ ಮಾಡಿಕೊಂಡು ಅದರ ಜೊತೆ ಆಟವಾಡುತ್ತಿರುವ ಮಗು. ಹಠ ಮಾಡುವುದು ಅದರ ಗುಣ. ಆದರೆ ಈ ಮಗು ಒಳ್ಳೆಯ ಮಗುವಲ್ಲ. ಕೆಟ್ಟ ಮಗು. ಈ ಕೆಟ್ಟ ಮಗು ಮಾಡಬಾರದ್ದನ್ನೆಲ್ಲ ಮಾಡಿ, ಹೊಲಸಿನಲ್ಲೇ ಹೊರಳಾಡುತ್ತ ತಪ್ಪಾಳೆ ತಟ್ಟುತ್ತಿದೆ. ಅದಕ್ಕೆ ನಾವು ಹೇಳಬಹುದ್ದಾದ್ದೆಂದರೆ ತಟ್ಟು ತಪ್ಪಾಳೆ ಕೆಟ್ಟ ಮಗು.....!

Sunday, March 4, 2012

ಮಾಧ್ಯಮ ವರ್ಸೆಸ್ ವಕೀಲರು; ಇದಕ್ಕೆಲ್ಲ ಯಾರು ಹೊಣೆ ?





ಇಂದು ಬೆಳಿಗ್ಗೆ ದೂರವಾಣಿಯ ಮೂಲಕ ಮಾತನಾಡಿದ ಪತ್ರಕರ್ತ ಮಿತ್ರರೊಬ್ಬರು ಹೇಳಿದರು;
ನಾವು ಸಹ ಕೋರ್ಟ್ ಬೀಟ್ ಮಾಡಿದ್ದೇವೆ. ಆದರೆ ಎಂದೂ ಸಹ ಗಲಾಟೆಯಾಗಿಲ್ಲ. ಕೆಲವೊಮ್ಮೆ ಸಣ್ಣದಾಗಿ ಬೇಸರವಾದಾಗ ವಕೀಲರ ಸಂಘದ ಅಧ್ಯಕ್ಷರ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದೇವೆ. ಆದರೆ ಇಂದು ಯಾಕೆ ಹೀಗೆ ಆಗುತ್ತಿದೆ ?
ಅವರ ಈ ಪ್ರಶ್ನೆಗೆ ತಕ್ಷಣ ನನಗೆ ಅನ್ನಿಸಿದ್ದು ಹೌದು ಎಂದು ಆಗದಿದ್ದುದು ಇಂದು ಯಾಕೆ ಆಗುತ್ತಿದೆ ?
ನನಗೆ ಅನ್ನಿಸುವ ಹಾಗೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಇಡೀ ಸಮಾಜದಲ್ಲಿ ಅದರಲ್ಲೂ ಮುಖ್ಯವಾಗಿ ಪತ್ರಿಕೋದ್ಯಮ ಮತ್ತು ವಕೀಲ ವೃತ್ತಿಯಲ್ಲಿ ಅದ ಆಗುತ್ತಿರುವ ಬದಲಾವಣೆಯನ್ನು ಗಮನಿಸಬೇಕಾಗುತ್ತದೆ. ಅದು ಒಟ್ಟಾರೆಯಾಗಿ ಈ ವೃತ್ತಿಗಳ ಸ್ವರೂಪ ಮತ್ತು ಮೌಲ್ಯ ನಂಬಿಕೆಗಳಲ್ಲಿ ಆದ ಬದಲಾವಣೆ.
ಒಂದು ವೃತ್ತಿ ಅಂದ ತಕ್ಷಣ ಒಂದು ಸಿದ್ಧಾಂತದ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಈ ಸಿದ್ಧಾಂತಕ್ಕೆ ಮೌಲ್ಯದ ತಳಹದಿ ಇರಬೇಕು. ಒಬ್ಬ ವ್ಯಾಪಾರಿ ಕೂಡ ವ್ಯಾಪಾರ ನಡೆಸುವಾಗ ತಾನು ಹೀಗೆ ನಡೆದುಕೊಳ್ಳಬೇಕು ಮತ್ತು ಹೀಗೆ ನಡೆದುಕೊಳ್ಳಬಾರದು ಎಂದು ತನ್ನದೇ ಅದ ಲಕ್ಷ್ಮಣ ರೇಖೆಯನ್ನು ಹಾಕಿ ಕೊಳ್ಳುತ್ತಾನೆ. ಈ ಲಕ್ಷ್ಮಣ ರೇಖೆ ಒಟ್ಟಾರೆಯಾಗಿ ಅವನ ವ್ಯಾಪಾರವನ್ನು ವೃದ್ಧಿಸುವುದರ ಜೊತೆಗೆ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಒಳಗೊಂಡಿರುತ್ತದೆ. ಅಂದರೆ ತನ್ನ ವ್ಯಾಪಾರವನ್ನು ಹೆಚ್ಚಿಸಿಕೊಂಡು ಲಾಭ ಮಾಡುವುದರ ಜೊತೆಗೆ ಆತನಿಗೆ ತನ್ನ ಗಿರಾಕಿಗಳಿಗೆ ಹೆಚ್ಚಿನ ಮೋಸವಾಗಕೂಡದು ಎಂಬ ನಂಬಿಕೆ ಕೂಡ ಇರಬೇಕು. ಈ ಎಲ್ಲ ಅಂಶಗಳನ್ನು ಒಳಗೊಂಡ ತನ್ನದೇ ಆದ ವ್ಯಾಪಾರಿ ಧರ್ಮವನ್ನು ಅವನು ರೂಢಿಸಿಕೊಂಡಿರುತ್ತಾನೆ. ಈ ವ್ಯಾಪಾರಿ ಧರ್ಮದಲ್ಲಿ ಲಾಭದ ಜೊತೆ ಸಮಾಜದ ಹಿತದ ಅಂಶ ಕೂಡ ಇರಲೇಬೇಕು. ಅದಿಲ್ಲದಿದ್ದರೆ ವ್ಯಾಪಾರಿಯ ಮನಸ್ಸು ಧ್ರೋಹ ಚಿಂತನೆಯ ಅಂಗಳವಾಗಿ ಬಿಡುತ್ತದೆ. ಅಂದರೆ ವ್ಯಾಪಾರ ಕೂಡ ಬಹುಜನ ಹಿತದ ಸಾಮಾನ್ಯ ತಳಹದಿಯನ್ನು ಹೊಂದಿರಬೇಕು.
ಈಗ ನಾವು ಪತ್ರಿಕೋದ್ಯಮ ಮತ್ತು ವಕೀಲೀ ವೃತ್ತಿಯ ಬಗ್ಗೆ ಮಾತನಾಡೋಣ. ಈ ಎರಡೂ ವೃತ್ತಿಗಳಿಗೆ ಸಮಾಜದಲ್ಲಿ ಅತಿ ಉಚ್ಛವಾದ ಸ್ಥಾನ ಮಾನಗಳಿವೆ. ಸಾಮಾನ್ಯ ಮನುಷ್ಯನೊಬ್ಬ ಪತ್ರಕರ್ತರಿಗೆ ಮತ್ತು ವಕೀಲರಿಗೆ ಹೆಚ್ಚಿನ ಗೌರವವನ್ನು ಕೊಡುತ್ತಾನೆ. ಒಬ್ಬ ವ್ಯಾಪಾರಿಗಿಂತ ವಕೀಲರು ಮತ್ತು ಮಾಧ್ಯಮದವರಿಗೆ ಹೆಚ್ಚಿನ ಗೌರವವಿದೆ.
ನಾವೆಲ್ಲ ನೆನಪಿಸಿಕೊಳ್ಳಲೇ ಬೇಕಾದ ಮಹಾತ್ಮಾ ಗಾಂಧಿ ವಕೀಲರೂ ಆಗಿದ್ದರು. ಪತ್ರಕರ್ತರೂ ಅಗಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ ವಕೀಲೀ ವೃತ್ತಿಯನ್ನು ಮಾಡಿದವರು. ರಾಜ್ಯದ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ ಕಡಿದಾಳ ಮಂಜಪ್ಪ ಮುಖ್ಯಮಂತ್ರಿ ಸ್ಥಾನ ಹೋದ ಮೇಲೆ ಕರೀ ಕೋಟು ಹಾಕಿಕೊಂಡು ವಕೀಲಿ ವೃತ್ತಿಯನ್ನು ಮುಂದುವರಿಸಿದ್ದರು. ಹಲವು ಮಂತ್ರಿಗಳಲ್ಲಿ ಮನೆಗೆ ಕಳುಹಿಸಿದ ಏ. ಕೆ. ಸುಬ್ಬಯ್ಯ ಈಗಲೂ ವಕೀಲೀ ವೃತ್ತಿಯನ್ನು ಮಾಡುತ್ತಾರೆ.
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಹಲವಾರು ನಾಯಕರು ವಕೀಲಿ ವೃತ್ತಿಯನ್ನು ಮಾಡಿ ನಂತರ ಚಳವಳಿಗೆ ದುಮುಖಿದವರು. ಹಾಗೆ ಸ್ವಾತಂತ್ರ್ಯಾ ನಂತರ ಬಹಳಷ್ಟು ನಾಯಕರು ವಕೀಲರಾಗಿ ನಂತರ ರಾಜಕಾರಣಕ್ಕೆ ಇಳಿದು ಯಶಸ್ವಿಯಾಗಿದ್ದಾರೆ. ಹಾಗೆ ಪತ್ರ ಕರ್ತರಾಗಿಯೂ ಕೆಲಸ ಮಾಡಿದ್ದಾರೆ. ವಕೀಲೀ ವೃತ್ತಿ ಮತ್ತು ಪತ್ರಿಕೋದ್ಯಮ ಎರಡೂ ಸಹ ಸಾಮಾನ್ಯ ಜನರ ಜೊತೆ ನೇರವಗಿ ಸಂವಹನ ಮಾಡುವ ಅವರ ಜೊತೆ ಸದಾ ಮುಖಾಮುಖಿಯಾಗುವ ವೃತ್ತಿಗಳೇ ಅಗಿವೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಎರಡೂ ವೃತ್ತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪತ್ರಕರ್ತರು ಸಾಮಾಜಿಕ ಬದ್ಧತೆಯ ಪ್ರಶ್ನೆಯನ್ನು ಮರೆಯುತ್ತಿದ್ದಾರೆ. ಮಾಧ್ಯಮ ಕೂಡ ವ್ಯಾಪಾರವಗಿ ಮಧ್ಯವರ್ತಿಗಳು ವಿಜೃಂಭಿಸತೊಡಗಿದ್ದಾರೆ. ಹಾಗೆ ವಕೀಲಿ ವೃತ್ತಿ ಕೂಡ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಂಡಿದೆ. ರಾಜಕಾರಣಕ್ಕೆ ಇಳಿಯಬಯಸುವವರು ಯಾವುದೇ ಬದ್ಧತೆ ಇಲ್ಲದೆ ಎಲ್ ಎಲ್ ಬಿ ಮಾಡಿ ಕರಿ ಕೋಟು ಹಾಕಿಕೊಂಡು ಓಡಾಡ ತೊಡಗಿದ್ದಾರೆ. ಬಹಳಷ್ಟು ವಕೀಲರು ಎಂದೂ ನ್ಯಾಯಾಧೀಶರ ಎದುರು ವಾದವನ್ನು ಮಾಡಿದವರಲ್ಲ. ಅವರು ಕೋರ್ಟಿನ ಅಂಗಳದಲ್ಲಿ ಓಡಾಡಿಕೊಂಡು ವ್ಯಾಪಾರಿಯಾಗಿ ಕೆಲಸ ಮಾಡುತ್ತಾರೆ. ರಾಜಕಾರಣಕ್ಕೆ ವಕೀಲಿ ವೃತ್ತಿ ಸೋಪಾನವಾಗಿತ್ತು. ವಕೀಲರಾದವರು ಜನ ಸಾಮಾನ್ಯರ ನೋವುಗಳಿಗೆ ಸ್ಪಂದಿಸುವವರು ಮಾತ್ರವಲ್ಲ, ನ್ಯಾಯವನ್ನು ಕೊಡಿಸುವ ಪವಿತ್ರ ವೃತ್ತಿ. ಆದರೆ ಇಂದು ವಕೀಲಿ ವೃತ್ತಿ ಅಂತಹ ಪಾವಿತ್ರ್ಯವನ್ನು ಉಳಿಸಿಕೊಂಡಿದೆ ಎಂದು ಹೇಳುವುದು ಕಷ್ಟ. ಅದಕ್ಕೆ ಬಹು ಮುಖ್ಯವಾದ ಕಾರಣ ನೈತಿಕತೆಯ ಪ್ರಶ್ನೆ ಈ ವೃತ್ತಿಯಲ್ಲಿ ಮೊದಲಿನಷ್ಟು ಮುಖ್ಯವಾಗದೇ ಇರುವುದು ಎಂದು ಅನ್ನಿಸುತ್ತದೆ.
ಇದೇ ಮಾತನ್ನು ಪತ್ರಿಕೋದ್ಯಮದ ಕುರಿತೂ ಹೇಳಬಹುದು. ಹಾಗೆ ರಾಜಕಾರಣ ಕೂಡ. ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ಕಂಡುಕೊಳ್ಳಲು, ಪತ್ರಿಕೋದ್ಯಮ, ವಕೀಲೀ ವೃತ್ತಿ ಮತ್ತು ರಾಜಕಾರಣದ ನಡುವಿನ ಸೂಕ್ಷ್ಮ ಸಂಬಂಧವನ್ನು ಅವಲೋಕಿಸಬೇಕು. ಈ ಮೂರು ವೃತ್ತಿಗಳೂ ಆಂತರಿಕವಾದ ಮತ್ತು ಬಾಹ್ಯವಾದ ಸಂಬಂಧವನ್ನು ಹೊಂದಿವೆ. ಒಂದು ರೀತಿಯಲ್ಲಿ ಅಂತರಿಕ ಅವಲಂಬನೆ ಇವುಗಳ ನಡುವೆ ಇದೆ. ಜೊತೆಗೆ ಒಂದು ವೃತ್ತಿ ಇನ್ನೊಂದು ವೃತ್ತಿಯ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತಲೇ ಇವೆ. ರಾಜಕಾರಣಿಗಳು, ಪತ್ರಿಕೋದ್ಯಮಿಗಳು ಮತ್ತು ವಕೀಲರು ದಿನ ನಿತ್ಯದ ಒಡನಾಡಿಗಳು. ಪತ್ರಿಕೋದ್ಯಮಿ ರಾಜಕಾರಣವನ್ನು ದೂರದಿಂದ ನಿಂತು ನೋಡುವ ಸಾಕ್ಷಿ ಪ್ರಜ್ನೆ. ವಕೀಲ ವೃತ್ತಿಯಲ್ಲಿರುವವರು ರಾಜಕೀಯ ಮಹತ್ವಾಕಾಂಕ್ಷೆಯ ಜೊತೆಗೆ ರಾಜಕಾರಣಿಗಳ ರಕ್ಷಕರಾಗಿ ಕೆಲಸ ಮಾಡುವವರು. ರಾಜಕಾರಣಿಗಳಿಗೆ ತಮ್ಮ ಮಾತುಗಳನ್ನು ಜನರಿಗೆ ತಲುಪಿಸಲು, ತಮ್ಮ ಸತ್ಯ ಮತ್ತು ಸುಳ್ಳುಗಳನ್ನು ಪರಿಣಾಮಕಾರಿಯಾಗಿ ಹೇಳಲು ಮಾಧ್ಯಮ ಬೇಕು. ಹಾಗೆ ಅವರ ಸುಳ್ಳುಗಳನ್ನು ಮರೆಮಾಚಲು ತಮ್ಮ ಕೃತ್ಯವನ್ನು ನ್ಯಾಯಬದ್ಧಗೊಳಿಸಲು ವಕೀಲರು ಬೇಕು. ವಕೀಲರಿಗೆ ತಮ್ಮ ಮೇಲೆ ರಾಜಕಾರಣಿಗಳು ಅವಲಂಬಿಸಿದ್ದಾರೆ ಎಂಬುದು ಅಹಂ ಅನ್ನು ಜಾಗ್ರತಗೊಳಿಸುತ್ತಲೇ ಇರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಪತ್ರಿಕೋದ್ಯಮ ಕೂಡ ರಾಜಕಾರಣಿಗಳ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ನಿಯಂತ್ರಣಕ್ಕೆ ಒಳಗಾಗಿದೆ. ರಾಜಕಾರಣಿಗಳು ಮಾಧ್ಯಮದ ಮಾಲೀಕರಾಗುತ್ತಿದ್ದಾರೆ. ಈ ಮೂಲಕ ಪತ್ರಿಕೋದ್ಯಮದ ಮೇಲೆ ನಿಯಂತ್ರಣ ಸಾಧಿಸಲು ರಾಜಕಾರಣ ಯತ್ನ ನಡೆಸುತ್ತಿದೆ. ಹಾಗೆ ಪತ್ರಿಕೋದ್ಯಮಿಗಳಲ್ಲಿ ಅಧ್ಯಯನ ಮತ್ತು ನಿಷ್ಟೆಯ ಕೊರತೆ ಎದ್ದು ಕಾಣುತ್ತಿದೆ. ತಾರತಮ್ಯ ಜ್ನಾನ ಕಡಿಮೆಯಾಗುತ್ತಿದೆ. ಜೊತೆಗೆ ಪತ್ರಿಕೋದ್ಯಮಿಯಾದವನು ಪದ್ಮ ಪತ್ರದ ಮೇಲಿನ ಜಲ ಬಿಂಧುವಿನಂತೆ ಯಾವುದಕ್ಕೂ ಅಂಟಿಕೊಳ್ಳದೇ, ಕೆಲಸ ಮಾಡುವ ಸ್ಥಿತಿ ಇಲ್ಲ.
ಇಂತಹ ಸ್ಥಿತಿಯಲ್ಲಿ ಅರಾಜಕತೆ ಉಂಟಾಗುವುದು ತುಂಬಾ ಸಹಜ. ಇಂತಹ ಅರಾಜಕತೆಯಿಂದಲೇ ಕಳೆದ ವಾರ ಕೋರ್ಟ್ ಆವರಣದಲ್ಲಿ ನಡೆದಂತಹ ಅಹಿತಕರ ಘಟನೆಗಳು ನಡೆಯುತ್ತವೆ. ಬದ್ಧತೆ, ಶಿಸ್ತು ಇಲ್ಲದ ವಾತಾವರಣದಲ್ಲಿ ಕಲ್ಲುಗಳು ಹಾರಾಡುತ್ತವೆ. ಕುರ್ಚಿಗಳು ಮೇಲಿನಿಂದ ಪೊಲೀಸರ ತಲೆಯ ಮೇಲೆ ಬೀಳುತ್ತವೆ. ಅಧಿಕಾರಸ್ಥರ ಅಣತಿಯಂತೆ ನಡೆಯುವ ಪೊಲೀಸರು ಷಡ್ಯಂತ್ರಗಳ ರೂಪಗೊಳ್ಳುತ್ತವೆ.ಹಾಗೆ ಮಾಧ್ಯಮ ತನ್ನ ನೈತಿಕತೆಯ ಮೂಲ ಸಿದ್ಧಾಂತವನ್ನು ಮರೆತು ವ್ಯಕ್ತಿಗತ ರಾಜಕಾರಣದ ಅಂಗಳವಾಗುತ್ತದೆ.
ಈಗ ಮತ್ತೆ ಕೋರ್ಟ್ ಆವರಣದಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ಮಾತನಾಡೋಣ. ಈ ಘಟನೆಯಲ್ಲಿ ಪಾಲುದಾರರಾದವರು ಹೊರಗಿನಿಂದ ಬಂದವರು ಎಂದು ವಕೀಲರ ಸಂಘದ ಅಧ್ಯಕ್ಷ ಸುಬ್ಬಾ ರೆಡ್ಡಿ ವಾದಿಸುತ್ತಾರೆ. ಹಾಗಿದ್ದರೆ ಅವರನ್ನು ಗುರುತಿಸಿ ಕ್ರಮ ಕೈಗೊಳ್ಳುವ ಕೆಲಸವನ್ನು ವಕೀಲರ ಸಂಘ ಯಾಕೆ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಹಾಗೆ ವಕೀಲಿ ವೃತ್ತಿ ಮಾಡುವವರು ಈ ದೇಶದ ಸಂವಿಧಾನ, ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನಂಬಿಕೆಯನ್ನು ಇಟ್ಟುಕೊಂಡಿರಬೇಕು. ನಮಗಾದ ಎಲ್ಲ ಅನ್ಯಾಯಗಳಲ್ಲಿ, ಅದು ಮಾಧ್ಯಮ ಮಾಡಿದೆ ಎಂದು ಹೇಳಲಾದ ಅನ್ಯಾಯವೂ ಸೇರಿದಂತೆ ನ್ಯಾಯವನ್ನು ಒದಗಿಸುವ ಹೊಣೆ ನ್ಯಾಯಾಂಗಕ್ಕೆ ಇದೆ. ಹಾಗೆ ನಮ್ಮ ಅನ್ಯಾಯವನ್ನು ನಾವು ನ್ಯಾಯಾಂಗ ವ್ಯವಸ್ಥೆಯ ಗಮನಕ್ಕೆ ತರಬೇಕು. ಅಲ್ಲಿ ಪರಿಹಾರವನ್ನು ಪಡೆದುಕೊಳ್ಳಬೇಕು. ಆದರೆ ಕೆಲವು ವಕೀಲ ಮಿತ್ರರು ತಮಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ ಎನ್ನುವುದನ್ನು ಹಲವು ಬಾರಿ ಸಾಬೀತು ಪಡಿಸಿದ್ದಾರೆ. ಪೊಲಿಸನೊಬ್ಬ ಲೈಸೆನ್ಸ್ ಇಲ್ಲದೇ ದ್ವಿಚಕ್ರ ವಾಹನ ಓಡಿಸಿದ ಪ್ರಕರಣದಲ್ಲಿ ಒಂದು ದಿನ ಬೆಂಗಳೂರಿನ ಸಾಮಾನ್ಯ ಜನರಿಗೆ ಬದುಕು ನರಕವಾಗುವಂತೆ ಮಾಡಿದವರು ಇದೇ ವಕೀಲರಲ್ಲವೆ ? ಯಾಕೆ ಇಂತಹ ಪ್ರಕರಣಗಳನ್ನು ಅವರು ನ್ಯಾಯಾಸ್ಥಾನದ ಮುಂದೆ ಒಯ್ಯುವುದಿಲ್ಲ ? ಇದಕ್ಕೆ ಬದಲಾಗಿ ರಸ್ತೆಗೆ ಇಳಿಯುವುದು ಯಾಕೆ ? ಇವರಿಗೆ ದೇಶದ ನ್ಯಾಯ ವ್ಯವಸ್ಥೆಯ ಬಗ್ಗೆ ನಂಬಿಕೆ ಇಲ್ಲವೆ ? ಒಂದೊಮ್ಮೆ ವಕೀಲರಿಗೆ ನ್ಯಾಯಾಲಯಗಳ ಮೇಲೆ ನಂಬಿಕೆ ಇಲ್ಲ ಎಂದಾದರೆ ಅದಕ್ಕಿಂತ ದೊಡ್ದ ದುರಂತ ಬೇಕೆ ಇಲ್ಲ. ಒಂದೊಮ್ಮೆ ನ್ಯಾಯಾಲಯಗಳ ಬಗ್ಗೆ ನಂಬಿಕೆ ಇದ್ದೂ ಹೀಗೆ ಮಾಡುತ್ತಾರೆ ಎಂದಾದರೆ ಅವರು ಈ ವೃತ್ತಿಗೆ ಅರ್ಹರಲ್ಲ. ಜೊತೆಗೆ ಅವರು ಜನತಂತ್ರ ವ್ಯವಸ್ಥೆಯ ವಿರೋಧಿಗಳೂ ಆಗುತ್ತಾರೆ. ಈ ಎರಡು ಸಾಧ್ಯತೆಗಳಲ್ಲಿ ಯಾವುದು ಸರಿ ಎಂಬುದನ್ನು ವಕೀಲರ ಸಂಘದ ಅಧ್ಯಕ್ಷರೇ ಹೇಳಬೇಕು.
ಈ ಘಟನೆಯಲ್ಲಿ ತಪ್ಪು ಯಾರದು ಎಂಬುದನ್ನು ನಾನು ಹೇಳುವುದಿಲ್ಲ. ಯಾಕೆಂದರೆ ನನಗೆ ತಪ್ಪು ಯಾರದು ಎಂಬುದು ತಿಳಿದಿಲ್ಲ. ಇಡೀ ಘಟನೆಯನ್ನು ನಾನು ಮಾಧ್ಯಮದ ಮೂಲಕವೇ ತಿಳಿದುಕೊಂಡಿದ್ದೇನೆ. ಹೀಗಾಗಿ ಘಟನೆಗೆ ಇನ್ನೊಂದು ಮುಖವೂ ಇರಬಹುದು ಮತ್ತು ಇರುತ್ತದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇದನ್ನು ಗಮನಿಸಿ ಮಾಧ್ಯಮದಿಂದ ಆಗಿರುವ ಆಗುತ್ತಿರುವ ತಪ್ಪುಗಳನ್ನು ಸಮರ್ಥಿಸಿಕೊಳ್ಳಲು ನಾನು ಹೋಗುವುದಿಲ್ಲ. ಅದು ಸರಿಯಾದ ಕ್ರಮ ಕೂಡ ಅಲ್ಲ. ಮಾಧ್ಯಮದವರ ಅತಿಯಾದ ಪ್ರತಿಕ್ರಿಯೆ ರಸ್ತೆಗಿಳಿದು ನಡೆಸುತ್ತಿರುವ ಪ್ರತಿಭಟನೆಯನ್ನು ಸಂಪೂರ್ಣವಗಿ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಮಾಧ್ಯಮ ಕೂಡ ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚು ಹೊಣೆಗಾರಿಕೆಯಿಂದ ವರ್ತಿಸಬೇಕಾಗಿತ್ತು. ಘಟನೆಯನ್ನು ಅತಿ ರಂಜಿತವಾಗಿ ವರದಿ ಮಾಡಿದ ಹಲವು ಉದಾಹರಣೆಗಳೂ ಇದ್ದು ಅದು ಬೇಜವಾಬ್ದಾರಿಯ ವರ್ತನೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಘಟನೆಯಲ್ಲಿ ಪೊಲೀಸನೊಬ್ಬ ಅಸು ನೀಗಿದ ಎಂದು ವರದಿ ಮಾಡಿದ್ದಕ್ಕೆ ಮಾಧ್ಯಮದವರಾದ ನಾವೆಲ್ಲ ಕ್ಶಮೆ ಕೇಳಲೇ ಬೇಕು.
ನಮ್ಮ ನಮ್ಮ ತಪ್ಪುಗಳನ್ನು ನಾವು ಒಪ್ಪಿಕೊಂಡರೆ ನಾವು ಸಣ್ಣವರಾಗುವುದಿಲ್ಲ. ತಪ್ಪುಗಳನ್ನು ಒಪ್ಪಿಕೊಳ್ಳುವ ಮೂಲಕ ನಾವು ದೊಡ್ಡವರಾಗುತ್ತೇವೆ. ನಮ್ಮ ವೃತ್ತಿಗೆ ಜೊತೆಗೆ ನಮ್ಮ ಬದುಕಿಗೆ ನಾವು ನ್ಯಾಯವನ್ನು ಒದಗಿಸುತ್ತೇವೆ. ಆದರೆ ಅಕ್ಷರ ಅಹಂಕಾರದ ಪತ್ರಕರ್ತರು, ಧಿರಸಿನ ಅಹಂಕಾರ ವಕೀಲರು ತಮ್ಮ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ತಪ್ಪುಗಳನ್ನು ಒಪ್ಪಿಕೊಳ್ಳಲು ಇಬ್ಬರಿಗೂ ಅಹಂ ಅಡ್ಡಿಯಾಗುತ್ತಿದೆ. ಆದರೆ ತಮ್ಮ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳದವರು ಮತ್ತೊಂದು ತಪ್ಪನ್ನು ಮಾಡುತ್ತಾರೆ ಎಂಬುದು ನಿಜ. ಹೀಗೆ ಒಂದು ತಪ್ಪು ಇನ್ನೊಂದು ತಪ್ಪನ್ನು ಸರಿ ಮಾಡುವುದಿಲ್ಲ. ಇದನ್ನು ವಕೀಲರೂ ಅರ್ಥ ಮಾಡಿಕೊಳ್ಳಬೇಕು, ಪತ್ರಕರ್ತರೂ ಅರ್ಥ ಮಾಡಿಕೊಳ್ಳಬೇಕು.
ಇವತ್ತಿನ ಬಹುಮುಖ್ಯವಾದ ಸಮಸ್ಯೆ ಎಂದರೆ ರಾಜಕಾರಣ ನ್ಯಾಯಾಂಗ ಮತ್ತು ಮಾಧ್ಯಮ ರಂಗಗಳ ಅಹಂ. ಯಾರೂ ಸೋಲಲು ಸಿದ್ಧರಿಲ್ಲ. ಈ ಮೂರು ಅಂಗಗಳು ಪರಸ್ಪರ ಮೇಲಾಟ ನಡೆಸುತ್ತಿವೆ. ಮತ್ತು ತಮ್ಮ ತಮ್ಮ ಹಿತಾಸಕ್ತಿಗಾಗಿ ಇನ್ನೊಂದು ಅಂಗವನ್ನು ಬಳಸಿಕೊಂಡು ಷಡ್ಯಂತ್ರ ರೂಪಿಸುತ್ತಿವೆ. ಯಶಸ್ಸು ಹಣ ಮತ್ತು ಅಧಿಕಾರ ಮುಖ್ಯವಾದಾಗ ಮೌಲ್ಯಗಳು ಪಾತಾಳಕ್ಕೆ ಕುಸಿಯುತ್ತವೆ. ಸಾಮಾನ್ಯ ಮನುಷ್ಯ ಇದಕ್ಕೆ ಬಲಿ ಪಶು ಆಗುತ್ತಾನೆ. ಈಗ ಆಗುತ್ತಿರುವುದು ಅದೇ.

ನಾನು ಮಾತನಾಡುವುದಿಲ್ಲ....!





ನಾನು ಮಾತನಾಡಬೇಕಾದ್ದು ಬಹಳವಿದೆ.
ಆದರೆ ಮಾತನಾಡಲಾರೆ. ತುಟಿ ಬಿಚ್ಚಲಾರೆ.
ಎಲ್ಲಿಯೋ ನಿಂತ ಆತ್ಮರಹಿತ ದೇಹಗಳು.
ಮನಸ್ಸು ಕಳೆದುಕೊಂಡ ಆತ್ಮಗಳು. ನಡೆಯುತ್ತಿದೆ ಕಾರ್ಗತ್ತಲ ಪ್ರೇತ ನರ್ತನ.
ನಡುವೆ ನಿಂತು ನೋಡುವವರು ಯಾರು ?

ಕೈ ಮಾತ್ರ ಉದ್ದ ಉದ್ದ, ಅದೇ ಮುಂದೆ.
ಬೀಸಿದರೆ ಸಾಕು, ಹಾರುತ್ತದೆ ಕಲ್ಲು
ಹರಿಯುತ್ತದೆ ರಕ್ತ, ವಿಘ್ನ ಸಂತೋಷಿಗಳಿಗೆ ಸಂತಸ,
ಇವರ ಗಧಾಯುದ್ಧದಲ್ಲಿ ಸೋಲುವವರು ಯಾರು ?
ಗೆಲ್ಲುವವರು ಯಾರು ?
ಹೀಗಾಗಿ ನಾನು ಮಾತನಾಡುವುದಿಲ್ಲ.

ದೇಹದ ಮೇಲಿನ ಗಾಯ, ಮನಸ್ಸಿನಲ್ಲಿ ಮಾಯುವುದಿಲ್ಲ.
ಮನಸ್ಸು ಸತ್ತವರಿಗೆ ಹೃದಯ ಮಿಡಿಯುವುದಿಲ್ಲ.
ನಡೆಯುತ್ತದೆ ಪ್ರತಿಭಟನೆಯ ಮೆರವಣಿಗೆ.
ಕೂಗು, ಘೋಷಣೆ, ದೋಷರೋಪಣೆ,
ಇವರಿಗೆ ಅವರ ಮೇಲೆ ಸಿಟ್ಟು ಅವರಿಗೆ ಇವರ ಮೇಲೆ ಕಡು ಕೋಪ.
ಇಲ್ಲಿ ಸತ್ಯವನ್ನು ಕಂಡವರು ಯಾರು ?
ಹೀಗಾಗಿ ನಾನು ಮಾತನಾಡುವುದಿಲ್ಲ.

ಸತ್ಯ ಎಲ್ಲರಿಗೂ ದಕ್ಕುವುದಿಲ್ಲ. ಸತ್ಯಕ್ಕೆ ಸುಳ್ಳಿನ ಸೌಂದರ್ಯವಿಲ್ಲ.
ನಾನು, ನೀನು, ಅವನು ಇವನು, ಯಾರು ಯಾರಾದರೇನು ?
ನಾನು ಎಂಬುದೇ ಅಹಂಕಾರ, ಅಲ್ಲಿದೇ ಸುಳ್ಳಿನ ಬೀಜ.
ಸುಳ್ಳಿನ ಸೌಧದಲ್ಲಿ ವಿಧಾನ ಎಲ್ಲಿದೆ ? ನಿಧಾನ ಎಲ್ಲಿದೆ ?
ಹೀಗಾಗಿ ನಾನು ಮಾತನಾಡುವುದಿಲ್ಲ.

ಒಬ್ಬರಿಗೆ ಅಕ್ಷರದ ಅಹಂಕಾರ, ಇನ್ನೊಬ್ಬರಿಗೆ ಧಿರುಸಿನ ಧರ್ಪ.
ನಡುವೆ ನಾನು ನಾನೇ, ಆದರೆ ಅವರೇನು ಇವರೇನು ?
ಅವರಿಗೆ ಇವರೇನು ? ಇವರಿಗೆ ಅವರೇನು ?
ಇವರಿಗೆ ಅವರ ಮೇಲಿನ ಸವಾರಿ ಬೇಕು, ಅವರಿಗೆ ಇವರ ಮೇಲೆ
ಕುಳಿತು ಸಾಗಬೇಕು.
ಇವರು ಅವರಾಗುವುದಿಲ್ಲ, ಅವರಿಗೆ ಇವರಾಗುವುದು ಬೇಕಿಲ್ಲ.
ಹೀಗಾಗಿ ನಾನು ಮಾತನಾಡಬೇಕಿಲ್ಲ.

ಕುರುಡನ ಹೆಗಲ ಮೇಲೆ ಕುಳಿತ ಕುರುಡರ ಮೆರವಣಿಗೆ.
ದಾರಿ ಸಾಗುವುದಾದರೂ ಹೇಗೆ ? ದಾರಿ ಕಾಣುವುದಾದರೂ ಹೇಗೆ ?
ನಾನು ಎಂಬ ಅಹಂಕಾರ, ಅವನು ಎಂಬ ತಿರಸ್ಕಾರ
ಮನಸ್ಸು ಸಿದ್ಧಪಡಿಸಿಕೊಂಡವರಿಗೆ ಸತ್ಯದರ್ಶನ ಅಗುವುದಿಲ್ಲ.
ಹೀಗಿದ್ದಾಗ ಮಾತನಾಡಲು ಏನಿದೆ ?
ಹೀಗಾಗಿ ನಾನು ಮಾತನಾಡುವುದಿಲ್ಲ.

ಎಲ್ಲವನು ಕಳಚಿದವನಿಗೆ ಮುಚ್ಚಿಕೊಳ್ಳಲು ಏನೂ ಬೇಕಿಲ್ಲ.
ಎಲ್ಲವನೂ ಮುಚ್ಚಿಕೊಂಡವರ ಒಳಗಿರುವುದೇನು ?
ಕುರೂಪ, ನೋಡಲಾಗದ ರೂಪ, ಅದೇ ಅಲ್ಲವೇನು ?
ಹೀಗಾಗಿ ಮಾತನಾಡಬೇಕಾದ್ದು ಬಹಳವಿದ್ದರೂ
ನಾನು ಮಾತನಾಡುವುದಿಲ್ಲ.

ಗೊಮ್ಮಟನಿಗೆ ಅಂಗಿ ತೊಡಿಸುವುದು ಬೇಕಿಲ್ಲ
ಅಕ್ಕನಿಗೆ ಯಾವ ಹಂಗೂ ಇಲ್ಲ. ಬಿಚ್ಚಿದವರಿಗೆ ಮುಚ್ಚಿಕೊಳ್ಳುವುದೂ ಬೇಕಿಲ್ಲ
ಎಲ್ಲವನೂ ಬಿಚ್ಚಿದಾಗ ನಾನು ಇಲ್ಲ, ನೀನು ಇಲ್ಲ
ನಾನು ನೀನು ಇಲ್ಲದಾಗ ಇರುವುದೇ ಎಲ್ಲ.
ಇದು ಅರ್ಥವಾಗದವರಿಗೆ ನಾನು ಮಾತನಾಡಬೇಕಿಲ್ಲ.
. .

Sunday, February 12, 2012

ಪ್ರೀತಿ ಎಂದರೆ ಬರೀ ಪ್ರೀತಿ ತಾನೆ ?





ಪ್ರೀತಿಯ ಹೆದ್ದಾರಿಯಲ್ಲಿ ಮೈಲುಗಲ್ಲುಗಳಿಲ್ಲ.
ಅದು ಗುರಿಯಿಲ್ಲದ ಮುಗಿಯದ ದಾರಿ.
ಅಲ್ಲಿ ಸಾಗಲು ಬೇಕಿಲ್ಲ. ಬಸ್ಸು ಕಾರು, ಯಾರದೋ ಕಾರುಬಾರು
ಅಲ್ಲಿ ನಡುಗೆಯೇ ಪ್ರಧಾನ, ಅಲ್ಲಿಲ್ಲ ಹಂಗಿನರಮನೆಯ ವಾರಸುದಾರರು.
ಪ್ರೀತಿ ಎಂದರೆ ಬರೀ ಪ್ರೀತಿ ತಾನೆ ?

ಕಾಣುತ್ತಿದೆ, ಹೆದ್ದಾರಿಯಲ್ಲಿ ನೂರೆಂಟು ಹೆಜ್ಜೆ ಗುರುತುಗಳು.
ಅಲ್ಲಲ್ಲಿ, ಅಸ್ಥಿಪಂಜರದ ಗೂಡುಗಳು, ನೆನಪಿನ ಮಾಡುಗಳು,
ಸಮಾಧಿಯ ಮೇಲಿನ ಗುಲಾಬಿ ಹೂವುಗಳು. ಕೇಳುವ ಪಿಸು ಮಾತುಗಳು.
ಸಲೀಮ್ ಅನಾರ್ಕಲಿಯ ದುರಂತ, ರೋಮಿಯೋ ಜ್ಯುಲಿಯೆಟ್ ಳ ಬಿಸಿಯಪ್ಪುಗೆ,
ಎಲ್ಲವೂ ಇಲ್ಲಿವೆ, ಇದು ಮುಗಿಯದ ಅಂಕ.
ಪ್ರೀತಿ ಎಂದರೆ ಹಾಗೆ ತಾನೆ ? ಅದು ಬರೀ ಪ್ರೀತಿ ತಾನೆ ?

ಯಾರು ಏನು ಹೇಳಿದರೇನು ಪ್ರೀತಿಸುವವರಿಗೆ ?
ಅವರಿಗೆ ಅವರದೇ ದಾರಿ. ಅಪ್ಪ ಅಮ್ಮನೇ ಅವರಿಗೆ ವ್ಯಾಪಾರಿ.
ಪ್ರೀತಿಸುವ ಹೃದಯಕ್ಕೆ ಮಾತು ಅರ್ಥವಾಗುವುದಿಲ್ಲ, ತರ್ಕ ಬೇಕಿಲ್ಲ.
ಅದು ಮಾತಿಗೆ, ತರ್ಕಕ್ಕೆ ವಾದಕ್ಕೆ ಸಿಗುವ ವಿಚಾರವೂ ಅಲ್ಲ.
ಪ್ರೀತಿ ಎಂದರೆ ಬರೀ ಪ್ರೀತಿ ತಾನೆ ?

ಪ್ರೀತಿಯ ಹೆದ್ದಾರಿಯಲ್ಲಿ ನೂರೆಂಟು ಕೊರಕಲು, ಹಾದಿ ಮಾತ್ರ ಸವಕಲು
ಆದರೂ ಹೆಜ್ಜೆ ಇಡುವುದು ಕಷ್ಟ, ನೋಡಬೇಕಲ್ಲ ಆತ್ಮಬಲದತ್ತ ?
ಸಮುದ್ರ ಸೆಳೆತಕ್ಕೆ ಅದರ ಎಳೆತಕ್ಕೆ ಯಾರಪ್ಪಣೆ ಬೇಕಿಲ್ಲ.
ಹುಣ್ಣಿಮೆಯ ಚಂದಿರನ ನೋಡಿ ಉಬ್ಬುವ ದಬ್ಬುವ ಸಾಗರಕ್ಕೆ
ಪ್ರೀತಿ ಇರಲೇಬೇಕಲ್ಲ ? ಯಾಕೆಂದರೆ,
ಪ್ರೀತಿ ಎಂದರೆ ಬರೀ ಪ್ರೀತಿ ತಾನೆ ?

ಹರಿವ ನದಿಗೆ, ನೀಲಿ ಅಕಾಶಕ್ಕೆ, ಬೀಸುವ ಗಾಳಿಗೆ
ಹಕ್ಕಿಗಳ ಚಿಲಿಪಿಲಿಗೆ, ಪ್ರಾಣಿಗಳ ನಲಿವಿಗೆ
ಅಬ್ಬರಿಸುವ ಗುಡುಗಿಗೆ,ರೌದ್ರ ಗಂಭೀರದ ಕಾಡಿಗೆ
ಕಿಚ್ಚು ತುಂಬಿದ ಅಗ್ನಿಗೆ, ಕಲಿಸಿದವರು ಯಾರು ?
ಪ್ರೀತಿ ಎಂದರೆ ಹಾಗೆ, ಬರೀ ಪ್ರೀತಿ ತಾನೆ ?

ವಾಲೆಂಟೈನ್ ಗೆ ಮೇಘಧೂತನ ಸಾಂಗತ್ಯ,
ಅವನ ಹಾಡಿಗೆ ಇವನು ಹಾಕುವನ ತಾಳ.
ಅವನು ನಡೆವಾಗ ಇವನು ನೋಡುವನು
ಇವನು ನಡೆವಾಗ ಅವನು ನೋಡುವನು.
ಅವನು ಇವನು ಇಬ್ಬರೂ ನಡೆದವರೇ ಅಲ್ಲವೇ
ಪ್ರೀತಿಯ ಹೆದ್ದಾರಿಯಲ್ಲಿ ? ಹೀಗಾಗಿ,
ಪ್ರೀತಿ ಎಂದರೆ ಬರೀ ಪ್ರೀತಿ ತಾನೆ ?

ಪ್ರೀತಿ ಹೃದಯದಲ್ಲಿ ಹುಟ್ಟುತ್ತದೆಯಂತೆ. ಮನಸ್ಸಿನಲ್ಲಿ ಬೆಳೆಯುತ್ತದೆಯಂತೆ.
ಕಾಲಿನಲ್ಲಿ ಶಕ್ತಿ ತುಂಬುತ್ತದೆಯಂತೆ, ಯಾರಿಗೆ ಗೊತ್ತು ಪ್ರೀತಿಯ ನೂರೆಂಟು ಪರಿ ?
ದಿನವೂ ಪ್ರೀತಿಸುವವರಿಗೆ ಬೇಕಿಲ್ಲ ಪ್ರೀತಿಗಾಗಿಯೇ ದಿನಚರಿ. ಅವರಿಗೆ ಎಲ್ಲ ದಿನವೂ ಸರಿ.

Sunday, February 5, 2012

ತಮಿಳು, ಮಲೆಯಾಳಿ ತಲೆಗಳ ನಡುವೆ ನಾನೊಬ್ಬನೇ ಸುದ್ದಿ ಮಾಡಿದೆ...!



ಡಾ. ರಾಜಕುಮಾರ್, ಏಮ್. ಡಿ. ನಲಪತ್ ಮತ್ತು ನರಹಂತಕ ವೀರಪ್ಪನ್





೨೦೦೦ ಇಸ್ವಿ ಮೇ ತಿಂಗಳು. ಅದೊಂದು ದಿನ ನನಗೊಂದು ದೂರವಾಣಿ ಕರೆ ಬಂತು. ಏಷ್ಯಾನಟ್ ಚಾನಲ್ ನ ಮಾಲಿಕರಾದ ರಾಜು ಮೆನನ್ ಅವರು ನಿಮ್ಮನ್ನು ನೋಡಲು ಬಯಸಿದ್ದಾರೆ ಎಂದು ಆ ದೂರವಾಣಿ ಕರೆಯ ಸಾರಾಂಶ. ಹಾಗೆ ಈ ಕರೆ ಮಾಡಿದವರು ಇನ್ನೊಂದು ಪ್ರಶ್ನೆ ಕೇಳಿದರು.
ನಿಮಗೆ ಟೀವಿ ವಾಹಿನಿಯಲ್ಲಿ ಕೆಲಸ ಮಾಡಲು ಇಷ್ಟ ಇದೆಯೆ ?
ನನಗೆ ತಕ್ಷಣ ಏನು ಉತ್ತರ ನೀಡಬೇಕು ಎಂದು ತಿಳಿಯಲಿಲ್ಲ. ಯಾಕೆಂದರೆ ಆಗ ನಾನು ಕನ್ನಡ ಪ್ರಭ ಪತ್ರಿಕೆಯ ಮುಖ್ಯ ವರದಿಗಾರನಾಗಿದ್ದೆ. ರಾಜಕೀಯ ವರದಿಗಾರಿಕೆಯಲ್ಲಿ ನನಗೆ ಗೌರವದ ಸ್ಥಾನವಿತ್ತು. ಇದನ್ನು ಬಿಟ್ಟು ಟೀವಿಯ ಹಿಂದೆ ಹೋಗಲೇ ಎಂಬುದು ನನ್ನ ಮುಂದಿರುವ ಪ್ರಶ್ನೆಯಾಗಿತ್ತು.
ಆದರೆ ನನ್ನ ಜಾಯಮಾನ ಬೇರೆ ರೀತಿಯದು. ನಾನು ಬದುಕನ್ನು ಬಂದ ಹಾಗೆ ಸ್ವೀಕರಿಸುವವನು. ಯಾವುದಕ್ಕೂ ಹಪಹಪಿಸದೆ, ಸಿಕ್ಕಿದ್ದಕ್ಕೆ ಸಂತೋಷ ಪಡುವುದು ನನ್ನ ಸ್ವಭಾವ. ಆದರೆ ಯಾವುದೇ ಸವಾಲನ್ನು ಎದುರಿಸಲು ನಾನು ಹಿಂದೇಟು ಹಾಕದವನು.
ನಾನು ರಾಜು ಮೆನನ್ ಅವರನ್ನು ಭೇಟಿ ಮಾಡಿದೆ. ಅವರ ಜೊತೆಗೆ ಖ್ಯಾತ ಪತ್ರಕರ್ತ ಎಮ್.ಡಿ. ನಲಪತ್ ಇದ್ದರು.
ನಾವು ಸುಮಾರು ಅರ್ಧ ಗಂಟೆಯ ಕಾಲ ಕರ್ನಾಟಕದ ರಾಜಕಾರಣದ ಬಗ್ಗೆ ಚರ್ಚೆ ಮಾಡಿದೆವು. ಕೊನೆಗೆ ನಲಪತ್ ಹೇಳಿದರು
ನಮ್ಮ ಚಾನಲ್ ಗೆ ಸುದ್ದಿ ವಿಭಾಗದ ಮುಖ್ಯಸ್ಥರಾಗಲು ಇವರೇ ಸೂಕ್ತ ವ್ಯಕ್ತಿ.
ನಲಪತ್ ಈ ಮಾತು ಹೇಳಿದ ನಂತರ ರಾಜು ಮೆನನ್ ನೋಡಿ ನಿಮಗೆ ೩೫ ಸಾವಿರ ಸಂಬಳ. ಹಾಗೆ ಉಳಿದೆ ಬೇರೆ ಬೇರೆ ಸೌಲಬ್ಯಗಳನ್ನು ನೀಡುತ್ತೇವೆ.
ನನಗೆ ಅಲ್ಲಿ ಮಾತನಾಡಲು ಅವಕಾಶವೇ ಇರಲಿಲ್ಲ. ಜೊತೆಗೆ ಆಗ ಕನ್ನಡ ಪ್ರಭದಲ್ಲಿ ನನಗೆ ಬರುತ್ತಿದ್ದ ಸಂಬಳ ೧೬ ಸಾವಿರ ರುಪಾಯಿಗಳು. ತಕ್ಷಣ ನಾನು ಅವರ ಜೊತೆ ಸೇರಲು ಒಪ್ಪಿಕೊಂಡು ಬಿಟ್ಟೆ.
ಇದಾದ ಎರಡು ತಿಂಗಳುಗಳ ನಂತರ ಕನ್ನಡ ಪ್ರಭಕ್ಕೆ ರಾಜೀನಾಮೆ ನೀಡಿದೆ. ಏಷ್ಯಾನೆಟ್ ಮಲೆಯಾಳಿ ಚಾನಲ್ ನ ಬೆಂಗಳೂರು ಬ್ಯುರೋದ ಮುಖ್ಯಸ್ಥನಾಗಿ ಅಧಿಕಾರ ಒಹಿಸಿಕೊಂಡೆ. ಆಗಲೇ ಜೀ ನ್ಯೂಸ್ ಜೊತೆ ಸೇರಿ ಏಷ್ಯಾನಟ್ ಕಾವೇರಿ ಎಂಭ ಕನ್ನಡ ಚಾನಲ್ ಪ್ರಾರಂಭಕ್ಕೆ ಎಲ್ಲ ವ್ಯವಸ್ಥೆಯಾಗಿತ್ತು. ನಾನು ಆ ಚಾನಲ್ ನ ಸುದ್ದಿ ವಿಭಾಗವನ್ನು ನೋಡಿಕೊಳ್ಳಬೇಕಿತ್ತು.
ನಾನು ಮಣಿಪಾಲ್ ಟವರ್ ನಲ್ಲಿದ್ದ ಏಷ್ಯಾನೆಟ್ ಕಚೇರಿಯಲ್ಲಿ ನನ್ನ ಕೆಲಸವನ್ನು ಪ್ರಾರಂಭಿಸಿದೆ. ಆಗಲೇ ಬಂದಿದ್ದ ಅರ್ಜಿಗಳನ್ನು ನೋಡುವುದು, ಅವುಗಳನ್ನು ಏ ಬಿ ಸಿ ಎಂದು ವರ್ಗೀಕರಿಸಿ ಯಾರನ್ನು ಸಂದರ್ಷನಕ್ಕೆ ಕರೆಯಬೇಕು ಎಂಬ ತೀರ್ಮಾನ ಕೈಗೊಳ್ಳುವುದು ಈ ಕೆಲಸ ನಡೆದಿತ್ತು. ಈ ನಡುವೆ ಕಾವೇರಿ ವಾಹಿನಿ ಪ್ರಾರಂಭವಾಯಿತು. ಮನರಂಜನಾ ಕಾರ್ಯಕ್ರಮಗಳಿಗೆ ಒಳ್ಳೆಯ ಪ್ರತಿಕ್ರಿಯೆ ಕೂಡ ಬರುತ್ತಿತ್ತು. ಈ ಸಂದರ್ಭದಲ್ಲಿ ಸುದ್ದಿಯನ್ನು ಪ್ರಾರಂಭಿಸಲು ಕನಿಷ್ಠ ಎರಡು ತಿಂಗಳು ಬೇಕು ಎಂದು ನಾನು ತಿಳಿಸಿದ್ದೆ.
ಆದರೆ ಈ ನಡುವೆ ಒಂದು ಅವಘಡ ಸಂಭವಿಸಿ ಬಿಟ್ಟಿತು. ಕನ್ನಡ ವರನಟ ಡಾ. ರಾಜಕುಮಾರ್ ಅವರನ್ನು ನರಹಂತಕ ವೀರಪ್ಪನ್ ಅಪಹರಿಸಿದ್ದ.
ಈ ಸುದ್ದಿ ನನ್ನ ಕಿವಿಗೆ ಬೀಳುವಷ್ಟರಲ್ಲಿ ನಾನು ಕಚೇರಿಯನ್ನು ತಲುಪಿದ್ದೆ. ಆದರೆ ಆಗಲೇ ನಮ್ಮ ಚಾನಲ್ ನಲ್ಲಿ ಸ್ಕ್ರಾಲಿಂಗ್ ಬರುತ್ತಿತು.
ಸಂಝೆ ಐದಕ್ಕೆ ಡಾ. ರಾಜಕುಮಾರ್ ಅಪಹರಣ ಕುರಿತ ವಿಶೇಷ ಸುದ್ದಿ ಪ್ರಸಾರವಾಗಲಿದೆ !
ನನಗೆ ಶಾಕ್. ಸ್ವಲ್ಪ ಸಮಯದಲ್ಲಿ ವಾಹಿನಿಯ ಸಿ ಇ ಓ ಶ್ಯಾಮಸುಂದರ್ ನನ್ನ ಬಳಿ ಬಂದರು. ನೋಡಿ ಇದು ಚೆನ್ನೈಗೆ ವಿಮಾನದ ಟಿಕೆಟ್. ಅಲ್ಲಿ ನಮ್ಮ ಏಷ್ಯಾನೆಟ್ ಸ್ಟುಡಿಯೋ ಇದೆ. ಅಲ್ಲಿಂದ ಅರ್ಧ ಗಂಟೆ ;ಲೈವ್ ಸುದ್ದಿ ಮಾಡಿ.
ನನಗ್ ಏನು ಹೇಳಬೇಕು ಎಂದು ತಿಳಿಯಲಿಲ್ಲ. ಅರ್ಧ ಗಂಟೆ ಲೈವ್ ಸುದ್ದಿ ಮಾಡುವುದು ಅಶ್ಟು ಸುಲಭವಲ್ಲ. ಜೊತೆಗೆ ಆಗ ಇದ್ದವನು ನಾನೊಬ್ಬನೇ. ಒಂದು ಬುಲಿಟೇನ್ ಮಾಡಲು ಹಲವರು ಕೈಜೋಡಿಸಬೇಕಾಗುತ್ತದೆ. ಅದು ಒಬ್ಬರೆ ಮಾಡುವ ಕೆಲಸವಲ್ಲ.
ಈ ಮಾತನ್ನು ಹೇಳಬೇಕು ಎಂದುಕೊಂಡೆ. ಆದರೆ ನನ್ನ ಮಾತನ್ನು ಅವರು ಕೇಳಿಸಿಕೊತ್ತಾರೆ ಎಂಬ ನಂಬಿಕೆ ನನಗಿರಲಿಲ್ಲ.
ಮೈನಾವತಿಯ ಮಗನಾದ ಶ್ಯಾಮ್ ಗೆ ಡಾ. ರಾಜಕುಮಾರ್ ಕುಟುಂಬದ ಜೊತೆ ಹತ್ತಿರದ ಸಂಬಂಧವಿತ್ತು. ಆದ್ದರಿಂದ ಅವರೂ ತೀರ್ವ ಆತಂಕದಲ್ಲಿ ಇದ್ದರು. ಅವರು ನನ್ನ ಪ್ರತಿಕ್ರಿಯೆಗೂ ಕಾಯದೇ ಟಿಕೆಟ್ ನೀಡಿ ಹೊರಟೇ ಬಿಟ್ಟರು. ಜೊತೆಗೆ ನೋಡಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಿಮ್ಮ ಹೆಸರಿನ ಫಲಕ ಹಿಡಿದ ಕಾರ್ ಡ್ರೈವರ್ ಕಾಯುತ್ತಿರುತ್ತಾನೆ. ಅವನು ನಿಮ್ಮನ್ನು ಏಷ್ಯಾನೆಟ್ ಸ್ಟುಡಿಯೋಕ್ಕೆ ತಲುಪಿಸುತ್ತಾನೆ ಎಂದು ಮಾಹಿತಿ ನೀಡಿದರು.
ನಾನು ಮಧ್ಯಾನ್ಹ ಹನ್ನೆರಡು ವರೆಯ ಚೆನ್ನೈ ವಿಮಾನ ಏರಿದೆ. ಆದರೆ ನನಗೆ ಡಾ. ರಾಜಕುಮಾರ್ ಅಪಹರಣದ ಯಾವ ಮಾಹಿತಿಯೂ ಸಿಗುವಂತಿರಲಿಲ್ಲ. ಆದರೂ ಅರ್ಧ ಗಂಟೆ ವಿಶೇಷ ನ್ಯೂಸ್ ಬುಲೆಟೀನ್ ಮಾಡುವ ಸವಾಲನ್ನು ನನಗೆ ಗೊತ್ತಿಲ್ಲದಂತೆ ಒಪ್ಪಿಕೊಂಡಿದ್ದೆ. ಆಗಿನ ಸ್ಥಿತಿಯಲ್ಲಿ ಈ ವಿಮಾನವಾದರೂ ಉರುಳಿ ಬೀಳಬಾರದೇ ಎಂದು ಪಹಪಹಿಸುವ ಸ್ಥಿತಿ.
ವಿಮಾನ ಚೈನ್ನೈಗೆ ತಲುಪಿದಾಗ ಮಧ್ಯಾನ್ಹ ೧ ಗಂಟೆ ಹದಿನೈದು ನಿಮಿಷ.
ವಿಮಾನ ನಿಲ್ದಾನದಿಂದ ಹೊರಕ್ಕೆ ಬಂದಾಗ ಶಶಿಧರ್ ಎಂಬ ನಾಮಫಲಕ್ ಹಿಡಿದ ದ್ರೈವರ್ ಕಾಣಿಸಿದ. ನಾನು ಅವನ ಬಳಿ ಹೋಗಿ ಕಾರು ಹತ್ತಿದೆ. ಆ ಮನುಷ್ಯನಿಗೆ ತಮಿಳು ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ನನಗೆ ತಮಿಳಿನಲ್ಲಿ ಗೊತ್ತಾಗುತ್ತಿದ್ದ ಏಕಮೇವ ಶಬ್ದ ಎಂದರೆ ತಮಿಳು ಎಂಬುದು ಮಾತ್ರ ! ಹೀಗಾಗಿ ನಮ್ಮಿಬ್ಬರ ನಡುವೆ ಸಂವಹನಕ್ಕೆ ಸಮಾನ ಭಾಷೆಯೇ ಇರಲಿಲ್ಲ.
ಸುಮಾರು ಅರ್ಧ ಗಂಟೆಯ ಪ್ರಯಾಣದ ನಂತರ ಅತ ನನ್ನನ್ನು ಯಾವುದೋ ಬೃಹತ್ ಕಂಫೆನಿಯ ಮುಂದೆ ತಂದು ನಿಲ್ಲಿಸಿದ. ನಾನು ಏಷ್ಯಾನೆಟ್ ಟೀವಿ ಸ್ಟೂಡಿಯೋ ಏಲ್ಲಿ ಎಂದು ಪ್ರಶ್ನಿಸಿದೆ. ಅವನಿಗೆ ಅರ್ಥವಾಗಲಿಲ್ಲ. ಕೊನೆಗೆ ಹತ್ತಿರವಿದ್ದ ಕೆಲವರು ನಮ್ಮ ಬಳಿ ಬಂದರು. ಅವರಲ್ಲಿ ಇಂಗ್ಲೀಷ್ ಬರುವವರು ನಮ್ಮ ನಡುವೆ ತರ್ಜುಮೆಗಾರರಾಗಿ ನಿಂತರು.
ಆಗ ತಿಳಿದಿದ್ದೆಂದರೆ ಆತ ಎಷ್ಯಾನೆಟ್ ನಿಂದ ಬಂದ ಡ್ರೈವರ್ ಅಗಿರಲಿಲ್ಲ. ಆತ ಬಂದಿದ್ದ್ರು ದೆಹಲಿಯಿಂದ ಬರಬೇಕಾಗಿದ್ದ ಈ ಪ್ರತಿಷ್ಟಿತ ಕಂಪೆನಿಯ ನಿರ್ದೇಶಕ ಶಶಿಧರ್ ಸಿಂಗ್ ಎಂಬವರನ್ನು ಕರೆದುಕೊಂಡು ಬರುವುದಕ್ಕಾಗಿ..!
ಈ ಸತ್ಯ ಪ್ರಾರಂಭವಾಗುತ್ತಿದ್ದಂತೆ ಆತ ಕುಗಾಡುವುದಕ್ಕೆ ಪ್ರಾರಂಭಿಸಿದ. ತಪ್ಪೆಲ್ಲ ನನ್ನದು ಎಂಬಂತೆ ಬೈಯತೊಡಗಿದೆ.
ನಾನು ದೊಡ್ದದಾದ ಧ್ವನಿಯಲ್ಲೇ ಉತ್ತರ ನೀಡಿದೆ. ಇಂಗ್ಲೀಷಿನಲ್ಲಿ ಬೈಯಲು ಶಬ್ದ ಸಿಗದಿದ್ದಾಗ ಕನ್ನಡದಲ್ಲಿ ಎಲ್ಲ ಸಂಸ್ಕೃತ ಶಬ್ದಗಳನ್ನು ಬಲಸಿ ಬೈದು ಸೇಡು ತೀರಿಸಿಕೊಂಡೆ.
ಆಗಲೇ ೨ ಗಂಟೆ ೨೫ ನಿಮಿಷವಾಗಿತ್ತು. ಐದು ಗಂಟೆಗೆ ವಿಶೇಷ ಸುದ್ದಿ ಲೈವ್ ಮಾಡಬೇಕಾಗಿದ್ದ ನಾನು ಗೊತ್ತಿಲ್ಲದ್ದ ಸ್ಥಳದಲ್ಲಿ ಸಿಕ್ಕಿಕೊಂಡಿದ್ದೆ. ಈ ಜಗಳ ಮುಗಿಯುವುದಿಲ್ಲ ಎನ್ನಿಸಿದಾಗ ಮಧ್ಯಸ್ಥಿಕೆ ಒಹಿಸಿದವರು ಒಂದು ಸಲಹೆ ನೀಡಿದರು. ಆ ಸಲಹೆಯ ಪ್ರಕಾರ ಈ ತಮಿಳು ಚಾಲಕನ ನನ್ನನ್ನು ಏಷ್ಯಾನೆಟ್ ವರೆಗೆ ತಲುಪಿಸಬೇಕು. ವಿಮಾನನಿಲ್ದಾಣದಲ್ಲಿ ಇರುವ ಏಷ್ಯಾನೆಟ್ ಚಾಲಕ ಶಶಿಧರ್ ಸಿಂಗ್ ಅವರನ್ನು ಇಲ್ಲಿಗೆ ಕರೆದುಕೊಂಡು ಬರಬೇಕು. ಈ ಸಲಹೆ ನನಗೂ ಒಪ್ಪಿಗೆಯಾಯಿತ್ತು.
ನಾನು ಮುಖ ಉದಿಸಿಕೊಂಡೇ ಈ ತರಲೆ ಡ್ರವರ್ ನ ಕಾರು ಹತ್ತಿದೆ.
ನನ್ನ ದುರ್ದವ ಇಲ್ಲಿಗೆ ಮುಗಿದಿರಲಿಲ್ಲ. ಕಷ್ಟಗಳ ಪರಂಪರೆ ಹಾಗೆಯೇ ಮುಂದುವರಿದಿತ್ತು.
ಏಷ್ಯಾನೆಟ್ ಸ್ಟುದೀಯೋ ಇದ್ದುದು ಚೆನ್ನೈನಿಂದ ೫೦ ಕಿಮೀ ದೂರದಲ್ಲಿ. ಅಲ್ಲಿನ ಬಿಎಸ್ ಎನ್ ಎಲ್ ಕಚೇರಿಯಲ್ಲೇ ಸ್ಟುದೀಯೋ ನಿರ್ಮಿಸಿ ಅಲ್ಲಿಂದ ಲೈವ್ ಕಾರ್ಯಕ್ರಮ ಮತ್ತು ಸುದ್ದಿಯನ್ನು ಅಪ್ ಲಿಂಕ್ ಮಾಡಲಾಗುತ್ತಿತ್ತು. ಅಂದರೆ ಅಲ್ಲಿಗೆ ತಲುಪಲು ಇನ್ನೂ ಮುಕ್ಕಾಲು ಗಂಟೆ ! ಅಯ್ಯೊ ದೇವರೆ....
ಅಂತೂ ನಾನು ಏಷ್ಯಾನೆಟ್ ಸ್ಟುದಿಯೋ ತಲುಪಿದಾಗ ೩ ಗಂಟೆ ೩೦ ನಿಮಿಷ. ೫ ಗಂಟೆಗೆ ಲೈವ್.
ನನಗೆ ಡಾ. ರಾಜಕುಮಾರ್ ಅಪಹರಣದ ಯಾವ ಮಾಹಿತಿಯೂ ಗೊತ್ತಿರಲಿಲ್ಲ ಹೀಗಿರುವಾಗ ಅರ್ಧ ಗಂಟೆ ಸುದ್ದಿ ಲೈವ್ ಮಾಡುವು
ದು ಹೇಗೆ ?
ನಾನು ಸ್ಟುದಿಯೋದ ಒಳಗೆ ಹೋದವನ್ನು ಅಲ್ಲಿದ್ದವರ ಬಳಿ ಡಾ. ರಾಜಕುಮಾರ್ ಅಪಹರಣದ ಎಲ್ಲ ದೃಶ್ಯಾವಳಿಗಳನ್ನು ತೋರಿಸುವಂತೆ ಕೇಳಿದೆ. ಆದರೆ ಅಲ್ಲಿ ಇನ್ನೊಂದು ಸಮಸ್ಯೆ. ಅಲ್ಲಿದ್ದವರು ಮಲೆಯಾಳಿ ಬಿಟ್ಟು ಬೇರೆ ಯಾವ ಭಾಷೆಯನ್ನು ಮಾತನಾ
ಡುತ್ತಿರಲಿಲ್ಲ. ಅವರಿಗೆ ಬರುತ್ತಿದ್ದ ಭಾಷೆ ಎಂದರೆ ಮಲೆಯಾಳಿ ಮತ್ತು ತಮಿಳು.
ದೃಶ್ಯಾವಳಿಗಳು ನೋಡಿ ಅದನ್ನು ಸುಮ್ಮನೆ ಕಟ್ ಮಾಡಿ ಇಡಿಸಿದೆ. ನಂತರ ಬೆಂಗಳೂರಿಗೆ ಸತತವಾಗಿ ಫೊನ್ ಮಾಡಿ ಎಲ್ಲ ವಿವಿರಗಳನ್ನು ಪಡದೆ. ಕಳೆದ ರಾತ್ರೆಯಿಂದ ನಡೆದ ಎಲ್ಲ ಘಟನಾವಳಿಗಳ ಚಿತ್ರ ನನಗೆ ದೊರಕಿತ್ತು. ಆದರೆ ಅಲ್ಲಿ ಪ್ಯಾಕೇಜ್ ಮಾಡುವ ಅವಕಾಶ ಇರಲಿಲ್ಲ.ಅಷ್ಟರಲ್ಲಿ ಸಮಯ ೪ ಗಂಟೆ ೪೫ ನಿಮಿಷ. ಸ್ಟುದಿಯೋ ಸಿದ್ದವಾಗಿತ್ತು. ಕೋಟೋಂದನ್ನು ಸಿಕ್ಕಿಸಿಕೊಂಡು ನಾನು ಒಳಗೆ ಹೆಜ್ಜೆ ಹಾಕಿದೆ. ಹೋಗುವಾಗ ನಾನು ಸುದ್ದಿಯನ್ನು ಹೇಳ್ತಾ ಹೋಗ್ತೀನಿ. ನೀವು ಅದಕ್ಕೆ ಸಂಬಂಧಿಸಿದ ದೃಶ್ಯಾವಳಿಗಳನ್ನು ಪ್ಲೇ ಮಾಡಿ ಎಂದು ಅವರಿಗೆ ಇಂಗ್ಲಿಷ್ ನಲ್ಲಿ ಸೂಚನೆ ನೀಡಿದೆ. ಅವರಿಗೆ ಅರ್ಥವಯಿತೋ ಇಲ್ಲವೋ ಅಂತಾನೂ ನನಗೆ ತಿಳಿಯಲಿಲ್ಲ.
ಲೈವ್ ಪ್ರಾರಂಭವಾಯಿತು,. ರೆಡ್ ಲೈಟ್ ಆನ್ ಆಯಿತು. ಸ್ಟಾರ್ಟ್ ಅಂದ ಅಲ್ಲಿದ್ದ ಮಹಾಶಯ.
ನಾನು ಡಾ. ರಾಜ್ ಅಪಹರಣದ ಇಪ್ಪತ್ನಾಲ್ಕು ಗಂಟೆಗಳ ಕಥೆಯನ್ನು ಹೇಳತೊಡಗಿದೆ,
ಎಲ್ಲವನ್ನೂ ವಿವರಿಸುವಾಗ ಅರ್ಧ ಗಂಟೆ ಕಳೆದಿತ್ತು. ಅದರೊಂದಿಗೆ ಒಬ್ಬನೆ ಅರ್ಧ ಗಂಟೆ ಬುಲಿಟಿನ್ ಮಾಡಿದ ಕೀರ್ತಿಯೂ ನನ್ನದಾಗಿತ್ತು.
ಇದಾದ ಮೇಲೆ ೧೫ ದಿನಗಳ ಕಾಲ ನಾನು ಚೆನ್ನೈನಲ್ಲೇ ಇದ್ದು ಬುಲಿಟಿನ್ ಮಾಡಿದೆ. ಅದು ಇನ್ನೊಂದು ಕಥೆ

.


Monday, January 30, 2012

ನಾನೂ ಮನೆ ಬಿಟ್ಟು ಓಡಿ ಬಂದಿದ್ದೆ....! - ಭಾಗ ೨



ಬೆಳಿಗ್ಗೆ ನಾಲ್ಕು ಗಂಟೆಗೆ ಮೈಕೊಡವಿ ಎದ್ದು ಕುಳಿತುಕೊಳ್ಳುವ ಬೆಂಗಳೂರು ರೈಲ್ವೆ ನಿಲ್ದಾಣ. ಬದುಕಿನ ಗಾಡಿ ಓಡಿಸುವುದಕ್ಕಾಗಿ ಏನೆಲ್ಲಾ ಮಾಡುವವರು.
೯ನೆಯ ತರಗತಿಯ ಲೋಕ ಜ್ನಾನವಿಲ್ಲದ ನಾನು ಎಲ್ಲವನ್ನೂ ನೋಡುತ್ತಿದ್ದೆ. ಆಗಲೇ ನನಗೆ ಅನ್ನಿಸಿದ್ದು ಬದುಕು ಎನ್ನವುದು ಈ ರೈಲ್ವೆ ಸ್ಟೇಷನ್ನಿನಂತೆ. ಇಲ್ಲಿ ಬಂದವರಿಗೆ ಯಾರು ಪರಿಚಿತರು ? ಯಾರು ಅಪರಿಚತರು ? ಪರಿಚಿತರು ಇದ್ದಕ್ಕಿದ್ದ ಹಾಗೆ ಅಪರಿಚಿತರಾಗುತ್ತಾರೆ. ಅಪರಿಚತರು ಪರಿಚಿತರಾಗುತ್ತಾರೆ.
ಈಗಲೂ ನಾನು ಆಗಾಗ ಹೇಳುವ ಒಂದು ಮಾತಿಗೆ ಬೆಂಗಳೂರಿನ ರೈಲ್ವೆ ನಿಲ್ದಾಣವೇ ಸ್ಪೂರ್ತಿ ಎಂದು ಈಗ ನನಗೆ ಅನ್ನಿಸುತ್ತದೆ. ಅದೆಂದರೆ ನಾವು ಸಹ ಒಂದು ರೈಲು. ನಾವು ಹೋಗುತ್ತಲೇ ಇರುತ್ತೇವೆ. ನಮ್ಮ ರೈಲಿಗೆ ಯಾರ್ಯಾರೋ ಬಂದು ಹತ್ತುತ್ತಾರೆ. ತಮ್ಮ ನಿಲ್ದಾಣ ಬಂದ ತಕ್ಷಣ ಇಳಿದು ಹೋಗುತ್ತಾರೆ. ಅದ್ದರಿಂದ ಬಂದು ಇಳಿದು ಹೋಗುವವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ನಮ್ಮ ರೈಲು ಹತ್ತುವ ಎಲ್ಲ ಜನ ಒಂದೇ ರೀತಿ ಇರುವುದಿಲ್ಲ. ಕೆಲವರು ರೈಲನ್ನೇ ತಮ್ಮ ಮನೆ ಎಂದು ತಿಳಿದುಕೊಂಡರೆ ಕೆಲವರು ಹೊಲಸು ಮಾಡುವುದಕ್ಕಾಗಿಯೇ ಬಂದವರಂತೆ ವರ್ತಿಸುತ್ತಾರೆ. ಇವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಕ್ಕೆ ರೈಲಿಗೆ ವ್ಯವಧಾನವಿಲ್ಲ..!
ನಾನು ಮನೆ ಬಿಟ್ಟು ಬಂದ ಮೂರನೆಯ ದಿನ ಅದು. ಹಲವು ರೀತಿಯ ಕನಸುಗಳನ್ನು ಹೊತ್ತು ಬಂದ ನನಗೆ, ಇಲ್ಲಿಗೆ ಬರುವುದಕ್ಕೆ ಮೊದಲು ಬೆಂಗಳುರು ಕನಸುಗಳನ್ನು ಸಾಕಾರಗೊಳಿಸುವ ಮಹಾನ್ ನಗರವಾಗಿ ಕಂಡಿತ್ತು. ಆದರೆ ಇಲ್ಲಿನ ಎರಡು ದಿನಗಳ ಅನುಭವ ಬೆಂಗಳೂರು ಕನಸುಗಳನ್ನು ನೀರು ಹಾಕಿ ಪೋಷಿಸಲಾರದು. ಇದು ಕನಸುಗಳನ್ನು ಕೊಲ್ಲುವ ಕಟುಕ ನಗರ ಎಂದು ಅನ್ನಿಸತೊಡಗಿತು.
ನನ್ನ ಊರು, ಊರಿನ ಜನ, ಮೈದುಂಬಿ ಹರಿಯುವ ನದಿ ಗುಡ್ಡ ಬೆಟ್ಟ ಎಲ್ಲ ನೆನಪಗಿ ಗೊತ್ತಿಲ್ಲದಂತೆ ಕಣ್ಣೀರು ಹರಿಯ ತೊಡಗಿತ್ತು.
ನಾವೆಲ್ಲ ಗುಡ್ದ ಬೆಟ್ಟಗಳಲ್ಲಿ ಓಡಾಡಿ ತಿನ್ನುತ್ತಿದ್ದ ಕವಳಿ ಹಣ್ಣು, ಬಿಕ್ಕೆ ಹಣ್ಣು, ಹಿಡಿಯುತ್ತಿದ್ಸ ಜೇನು ಹೀಗೆ ಒಂದೊಂದೆ ನೆನಪು ಮುಂದೆ ಬಂದು ನರ್ತಿಸತೊಡಗಿದಾಗ ಊರಿಗೆ ತಿರುಗಿ ಹೋಗುವ ಬಯಕೆ ಹೆಚ್ಚಾಗತೊಡಗಿತು. ಈ ನಗರ ಬದುಕು ನನ್ನದಲ್ಲ. ಇಲ್ಲಿ ನಾನು ಬದುಕಲಾರೆ. ಇಲ್ಲಿ ಹೋರಾಟ ಮಾಡಲಾರೆ ಎಂದು ಒಳ ಮನಸ್ಸು ಹೇಳತೊಡಗಿದಾಗ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ನಡೆದೆ.
ಆದರೆ ಊರಿಗೆ ತಿರುಗಿ ಹೋಗುವುದಕ್ಕೆ ನನ್ನ ಬಳಿ ಹಣ ಇಲ್ಲ. ಬಸ್ ಚಾರ್ಜ್ ಗೆ ಬೇಕಾದಷ್ಟು ಹಣ ದುಡಿಯೋಣ ಎಂದುಕೊಂಡರೆ ಯಾರೂ ಕೆಲಸ ನೀಡುವುದಿಲ್ಲ.
ನನ್ನ ಕಿಸೆಯನ್ನು ಮುಟ್ಟಿ ನೋಡಿಕೊಂಡೆ. ಅಲ್ಲಿ ಮೂರು ರೂಪಾಯಿ ೭೫ ಪೈಸೆ ಹಣ ಉಳಿದಿತ್ತು. ಈ ಹಣದಲ್ಲಿ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಹೋಗುವುದು ನಂತರ ಮುಂದೇನು ಎಂದು ತೀರ್ಮಾನಿಸುವುದು ಎಂದುಕೊಂಡವ ಶಿವಮೊಗ್ಗಗೆ ಹೊರಟ ಬಸ್ ಹತ್ತಿದೆ. ಮೂರು ರೂಪಾಯಿ ಹಣವನ್ನು ಕಂಡಕ್ಟರ್ ಕೈಗೆ ನೀಡಿ ಟಿಕೆಟ್ ನೀಡುವಂತೆ ಕೇಳಿಕೊಂಡೆ. ಆತ ನನ್ನ ಮುಖವನ್ನು ನೋಡಿ ಗುಬ್ಬಿಗಾ ? ಎಂದು ಪ್ರಶ್ನಿಸಿದ. ಹೌದು ಎಂದೆ. ಗುಬ್ಬಿ ಎನ್ನುವ ಊರು ಎಲ್ಲಿದೆ ಎಂಬುದು ನನಗೆ ತಿಳಿಯದಿದ್ದರೂ ಅದು ಬೆಂಗಳೂರು ಶಿವಮೊಗ್ಗ ನಡುವೆ ಎಲ್ಲಿಯೋ ಇದೆ ಎಂಬುದರಲ್ಲಿ ನನಗೆ ಯಾವ ಅನುಮಾನವೂ ಇರಲಿಲ್ಲ. ಜೊತೆಗೆ ಗುಬ್ಬಿಯಿಂದ ಶಿವಮೊಗ್ಗೆಗೆ ಎಷ್ಟು ದೂರ ಎಂಬುದು ನನಗೆ ತಿಳಿದಿರಲಿಲ್ಲ.
ಅದು ಬೆಳಗಿನ ಕೆಂಪು ಡಬ್ಬಿ ಬಸ್ಸು. ಅದನ್ನು ಶಾಲಾ ಬಸ್ ಅಂತಾನೂ ಕರೀತಿದ್ದರು. ಅದು ಸಮವಸ್ತ್ರ ಧರಿಸಿ ನಿಂತ ಶಾಲಾ ಮಕ್ಕಳು ಕಂಡ ತಕ್ಷಣ ನಿಂತು ಬಿಡುತ್ತಿತ್ತು. ಅವರನ್ನು ಹತ್ತಿಸಿಕೊಂಡು ಓಲಾಡುತ್ತ, ತೇಲಾಡುತ್ತ ಮುಂದುವರಿಯುತ್ತಿತ್ತು. ನಾನು ಅ ಮಕ್ಕಳನ್ನು ನೋಡುತ್ತಿದ್ದ ಹಾಗೆ ಮನಸ್ಸಿನಲ್ಲಿ ಒಂದು ರೀತಿಯ ತಳಮಳ. ನಾನೂ ಸಹ ಅವರಂತೆ ಸಮವಸ್ತ್ರ ಧರಿಸಿಕೊಂಡು ಶಾಲೆಗೆ ಹೋಗುವವನಾಗಿದ್ದೆ. ಆದರೆ ನಾನು ಹೈಸ್ಕೂಲಿಗೆ ಹೋಗುವಾಗ ಒಬ್ಬಂಟಿ. ನನ್ನ ಜೊತೆಗೆ ಹೈಸ್ಕೂಲಿಗೆ ಬರುವವರು ಯಾರೂ ಇರಲಿಲ್ಲ.
ಬೆಳಿಗ್ಗೆ ಎಂಟು ಕಾಲಿಗೆ ಮನೆಯಿಂದ ಹೊರಟರೆ ಸುಮಾರು ಒಂದು ತಾಸಿನ ದಾರಿ. ಮನೆಯ ಎದುರಿನ ಅಡಿಕೆ ತೋಟವನ್ನು ದಾಟಿ ಎದುರಿನ ದೊಡ್ಡ ಗುಡ್ದವನ್ನು ಹತ್ತಿ ಹೋಗಬೇಕು. ಗುಡ್ಡ ಎಂದರೆ ಅದು ಬೃಹದಾಕಾರದ ಗುಡ್ಡ. ಆ ಗುಡ್ದವನ್ನು ಹತ್ತುವುದೆಂದರೆ ಹಿಮಾಲಯವನ್ನು ಏರಿದಂತೆ. ದಾರಿಯ ಮಧ್ಯದಲ್ಲಿ ಕಾಣುತ್ತಿದ್ದ ನವಿಲಿನ ಹಿಂಡು. ಅಲ್ಲಲ್ಲಿ ಓಡುತ್ತ ಮರೆಯಾಗುವ ನರಿಗಳು. ಎಲ್ಲಿಂದಲೂ ಕೇಳಿ ಬರುತ್ತಿದ್ದ ಬೇರೆ ಬೇರೆ ಪ್ರಾಣಿಗಳ ಕೂಗು. ಅದೆಲ್ಲ ಎಷ್ಟು ಅಪ್ಯಾಯಮಾನ ಎನ್ನಿಸುತ್ತಿತ್ತೆಂದರೆ ಕೆಲವೊಮ್ಮೆ ನಾನು ಯಾವುದೋ ಮರವೊಂದನ್ನು ಏರಿ ಅಲ್ಲಿಯೇ ಕುಳಿತು ಬಿಡುತ್ತಿದ್ದೆ. ಹಾಗೆ ಕೆಲವೊಮ್ಮೆ ಕಾಡಿನ ಮಧ್ಯೆ ಇರುವ ಯಾವುದೇ ಮರವೊಂದರ ಬುಡದಲ್ಲಿ ಮಲಗಿ ನಿದ್ರೆ ಮಾಡಿ ಬಿಡುತ್ತಿದ್ದೆ. ಸಂಜೆಯಾಗುವ ಹೊತ್ತಿಗೆ ಎಚ್ಚರಗೊಂಡು ಹಾಗೆ ಮನೆಗೆ ಹಿಂತಿರುಗಿ ಬಿಡುತ್ತಿದ್ದೆ.
ಆ ಕೆಂಪು ಡಬ್ಬಿ ಬಸ್ಸಿನಲ್ಲಿ ಹೋಗುತ್ತಿದ್ದಾಗ ಇದೆಲ್ಲ ನೆನಪಾಗುತ್ತಿತ್ತು. ಹಾಗೆ ಬೆಂಗಳೂರು ಎಂಬ ಕಾಂಕ್ರಿಟ್ ಕಾಡಿಗೆ ಬಂದ ಮೇಲೆ ನಮ್ಮ ಊರು, ನಮ್ಮ ಕಾಡು ಎಷ್ಟು ಚಂದ ಎಂಬುದು ಗೊತ್ತಾಗಿತ್ತು. ನಗರ ಎನ್ನುವುದು ಅಡಗೋಲಜ್ಜಿ ಕಥೆಯ ಬ್ರಹ್ಮರಾಕ್ಷಸ ಎಂದು ಅನ್ನಿಸತೊಡಗಿದ್ದು.
ಬಸ್ಸಿನ ಕಿಡಕಿಯ ಬಳಿ ಕುಳೀತು ಹೊರಗೆ ನೋಡುತ್ತಿದ್ದ ನನಗೆ ದಾರಿಯಲ್ಲಿ ಎಲ್ಲೂ ಗುಡ್ಡ ಬೆಟ್ತಗಳೇ ಇಲ್ಲ, ಕಾಡು ಇಲ್ಲ ಎಂದು ಆಶ್ಚರ್ಯವಾಗುತ್ತಿತ್ತು. ಎಲ್ಲಿ ನೋಡಿದರೂ ಬಯಲು. ದೂರದಲ್ಲಿ ಕಾಣುವ ಮನೆಗಳು ಅಲ್ಲಿ ಊರೊಂದಿದೆ ಎಂಬುದನ್ನು ಸಾರಿ ಹೇಳುತ್ತಿದ್ದವು.
ಬೆಳಿಗ್ಲೆ ೯ ಗಂಟೆ ೪೫ ನಿಮಿಷಕ್ಕೆ ಬಸ್ಸು ಗುಬ್ಬಿಗೆ ಬಂದು ನಿಂತಿತು. ಕಂಡಕ್ಟರ್ ಗುಬ್ಬಿ ಗುಬ್ಬಿ ಎಂದು ಕೂಗಿ ಹೇಳುತ್ತ ನನ್ನತ್ತಲೇ ನೋಡುತ್ತಿದ್ದಾನೆ ಎಂದು ಅನ್ನಿಸಿ ಬಸ್ ನಿಂದ ಕೆಳಕ್ಕೆ ಇಳಿದೆ. ಇಳಿಯುತ್ತಿದ್ದಂತೆ ನನಗೆ ಗೊತ್ತಾದ ಅಂಶ ಎಂದರೆ ಗುಬ್ಬಿ ಎನ್ನುವುದು ತುಮಕೂರು ನಗರದ ಸಮೀಪ ಇರುವ ಒಂದು ಸಣ್ಣ ಪಟ್ಟಣ ಎಂಬುದು. ಅಂದರೆ ಶಿವಮೊಗ್ಗ ಬಸ್ಸ್ ಹತ್ತಿ ನಾನು ಬಂದಿದ್ದರೂ ತುಂಬಾ ದೂರವೇನೂ ಬಂದಿರಲಿಲ್ಲ. ಇನ್ನು ನಾನು ಸಾಗಬೇಕಾದ ದಾರಿ ತುಂಬಾ ದೂರವಿದೆ ಎಂದು ಅನ್ನಿಸಿ ಹೋಗುವುದು ಹೇಗೆ ಎಂಬುದೇ ಅರ್ಥವಾಗಲಿಲ್ಲ. ಆದರೆ ಆ ಸ್ಥಿತಿಯಲ್ಲೂ ನಾನು ಎದೆ ಗುಂದಿರಲಿಲ್ಲ.
ಆ ರಾಜ್ಯ ಹೆದ್ಧಾರಿಯಲ್ಲಿ ಶಿವಮೊಗ್ಗ ದಿಕ್ಕಿನ ಕಡೆಗೆ ಹಾಗೆ ನಡೆದು ಹೊರಟೆ. ದಿನಾಲು ಹತ್ತಾರು ಕಿಮೀ ನಡೆದ ಅಬ್ಯಾಸವಿದ್ದ ನನಗೆ ನಡೆಯುವುದು ಕಷ್ಟ ಎಂದೂ ಅನ್ನಿಸಲಿಲ್ಲ.
ನಮ್ಮ ಮನೆಯಿಂದ ಸಿದ್ದಾಪುರ ಪೇಟೆಯಲ್ಲಿರುವ ಸಿದ್ದಿವಿನಾಯಕ ಹೈಸ್ಕೂಲಿಗೆ ನಾನು ಹೋಗುತ್ತಿದ್ದುದು. ಸಿದ್ದಾಪುರಕ್ಕೆ ಕಾಲು ದಾರಿಯಲ್ಲಿ ಹೋದರೆ ಸುಮಾರು ೬ ಕಿಮೀ ದೂರ. ಅಂದರೆ ಹಸ್ಕೂಲಿಗೆ ಹೋಗಿ ಬರುವುದೆಂದರೆ ಸುಮಾರು ೧೨ ಕಿ ಮೀ ನಡಿಗೆ. ಚೆನ್ನಮಾವ್, ಅವರಗುಪ್ಪ ಊರುಗಳನ್ನು ದಾಟಿ, ಎರಡು ಗದ್ದೆ ಬೈಲು ಹಾದು ಹೋಗಬೇಕು. ಪ್ರತಿದಿನದ ಈ ನಡುಗೆಯಿಂದ ಕಾಲಿನಲ್ಲಿ ನಡೆಯುವ ಶಕ್ತಿ ಇತು. ಎಷ್ಟು ದೂರ ನಡೆದರೂ ಆಯಾಸವಾಗುತ್ತಿರಲಿಲ್ಲ.
ಹೀಗಾಗಿ ಗುಬ್ಬಿಯಿಂದ ನಾನು ಶಿವಮೊಗ್ಗ ರಸ್ತೆಯಲ್ಲಿ ನಡೆದು ಹೊರಟೆ. ಹಿಂದಿನ ದಿನ ರಾತ್ರಿಯಿಂದ ಹೊಟ್ಟೆಗೆ ಏನೂ ಬಿದ್ದಿರಲಿಲ್ಲ. ಹೀಗಾಗಿ ಹೊಟ್ಟೆಯ ಒಳಗೆ ಯಕ್ಷಗಾನ ಬಯಲಾಟ ನಡೆಯುತ್ತಿತ್ತು. ಆದರೂ ನಾನು ನಡೆಯುತ್ತಿದ್ದೆ. ಸುಮಾರು ಹತ್ತು ಹದಿನೈದು ಕಿಮೀ ನಡೆದಿರಬೇಕು. ಪಕ್ಕದಲ್ಲಿ ಒಂದು ತೆಂಗಿನ ತೋಟ. ಅದರ ಸ್ವಾಗತ ಕಮಾನಿನ ಎದುರು ಧಣಿವಾರಿಸಿಕೊಳ್ಳಲು ಕುಳಿತ. ಆ ತೋಟದಲ್ಲಿ ಏಳೇನೀರು ತೆಗೆಯುತ್ತಿದ್ದನ್ನು ಹಾಗೆ ನೋಡುತ್ತ ಕುಳಿತೆ. ಒಳಗೆ ತೋಟದಲ್ಲಿ ಇದ್ದವರು ಸುಸ್ತಾಗಿ ಕುಳಿತ ನನ್ನನ್ನು ನೋಡಿದರು. ಅವರಿಗೆ ಏನು ಅನ್ನಿಸಿತೋ ಏನೋ. ಅಜ್ಜನೊಬ್ಬ ಎರಡು ಏಳೇ ನೀರು ಹಿಡಿದುಕೊಂಡು ಗೇಟಿನ ಬಳಿ ಬಂದ. ನನ್ನನ್ನು ಏನು ಕೇಳದೇ ಒಂದು ಏಳೆ ನೀರು ಒಡೆದು ನೀಡಿದ. ನಾನು ಮರು ಮಾತನಾಡದೇ ಅವನ ಕೊಟ್ಟ ಏಳೆನೀರು ಕುಡಿದೆ. ಆತ ತಕ್ಷಣ ಇನ್ನೊಂದು ಏಳೇನೀರು ಒಡೆದು ಕೊಟ್ಟ. ಅದನ್ನೂ ಕುಡಿದೆ. ಹೋದ ಜೀವ ತಿರುಗಿ ಬಂದಂತಾಯಿತು.
ಎಷ್ಟು ಎಂದು ಕೇಳುತ್ತ, ನನ್ನ ಖಾಲಿ ಜೇಬನ್ನು ತಡವಿದೆ.
ಆತ ಇಲ್ಲ, ಇದನ್ನು ಹಣಕ್ಕಾಗಿ ನೀಡಲಿಲ್ಲ. ನೀನು ಸುಸ್ತಾಗಿದ್ದೆ. ಇದು ನನ್ನದಲ್ಲ ದೇವರು ಕೊಟಿದ್ದು. ನಿನಗೆ ಕೊಟ್ಟೆ ಎಂದು ಹೇಳಿದವನೇ ತಿರುಗಿಯೂ ನೋಡದೇ ಅಲ್ಲಿಂದ ಮತ್ತೆ ತೋಟದೊಳಗೆ ನಡೆದ.
ನನಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲ.
ಮತ್ತೆ ದೇಹದಲ್ಲಿ ಶಕ್ತಿ ತುಂಬಿಕೊಂಡಿತ್ತು. ಇನ್ನೂ ನೂರಾರು ಕಿಮೀ ನಡೆಯಬಲ್ಲೆ ಎಂಬ ಧೈರ್ಯ ಕೂಡ ಬಂದಿತ್ತು. ನಾನು ನನ್ನ ಈ ಪಯಣವನ್ನು ಮುಂದುವರಿಸಿದೆ.
ನಾನು ನಡೆಯುತ್ತಲೇ ಇದ್ದೆ. ಸಮಯ ಎಷ್ಟು ಎಂದು ಗೊತ್ತಾಗುವಂತಿರಲಿಲ್ಲ. ನನ್ನ ಬಳಿ ವಾಚ್ ಕೂಡ ಇರಲಿಲ್ಲ. ಸೂರ್ಯ ನೆತ್ತಿಯಿಂದ ಕೆಳಕ್ಕೆ ಇಳಿಯುವ ಹೊತ್ತಿಗೆ ಮತ್ತೆ ಸುಸ್ತಾಗಿತ್ತು. ಮತ್ತೆ ದಣಿವಾರಿಸಿಕೊಳ್ಳಲು ಮರದ ಕೆಳಗೆ ಕುಳಿತೆ. ಸಂಜೆಯ ಕತ್ತಲು ಸಾವಕಾಶವಾಗಿ ಎಲ್ಲೆಡೆಗೆ ಆವರಿಸಿಕೊಳ್ಳುತ್ತಿತ್ತು. ರಸ್ತೆ ಆ ಕತ್ತಲೆಯಲ್ಲಿ ಹೆಣದ ಹಾಗೆ ಮಲಗಿತ್ತು. ಅಕ್ಕ ಪಕ್ಕದ ಮರಗಳು ಕಪ್ಪನೆಯ ಆಕೃತಿಗಳಾಗಿ ಕಾಣುತ್ತಿದ್ದವು.
ನಾನು ಮತ್ತೆ ಎದ್ದು ನಡೆಯತೊಡಗಿದೆ. ಸುಮಾರು ಅರ್ಧ ಗಂಟೆ ನಡೆದಿರಬೇಕು. ಸೈಕಲ್ಲಿನ ಮೇಲೆ ವ್ಯಕ್ತಿಯೊಬ್ಬ ಬರುವುದು ಕಾಣಿಸಿತು. ಸುಮ್ಮನೆ ಅವನತ್ತ ನೋಡಿ ಕೈ ಅಡ್ದ ಮಾಡಿದೆ. ಆತ ನನ್ನತ್ತ ನೋಡಿ ಎಲ್ಲಿಗೆ ಅಂದ. ನಾನು ಶಿವಮೊಗ್ಗ ಎಂದು ಉತ್ತರಿಸಿದೆ.
ಆತ ಬೇರೆ ಏನೂ ಕೇಳಲಿಲ್ಲ. ನಾನು ಅರಸಿಕೆರೆಗೆ ಹೋಗುತ್ತಿದ್ದೇನೆ. ಅಲ್ಲ್ಲಿಯ ವರೆಗೆ ನಿನ್ನನ್ನು ಬಿಡುತ್ತೇನೆ. ಅಲ್ಲಿಂದ ಯಾವುದಾದರೂ ಲಾರಿಯನ್ನು ಹಿಡಿದುಕೊಂಡು ಶಿವಮೊಗ್ಗೆಗೆ ಹೋಗು ಎಂದ. ನಾನು ಸರಿ ಎಂದು ಅವನ ಸೈಕಲ್ಲಿನ ಹಿಂದೆ ಕುಳಿತೆ. ಆತ ಸೈಕಲ್ ತುಳಿಯುತ್ತ ಮಾತನಾಡತೊಡಗಿದ.
ಆತ ಮೂಲತಹ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದವನು. ಅರಸೀಕೆರೆಯಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುವವನು. ಪಕ್ಕದ ಹಳ್ಳಿಗೆ ಸಾಲ ವಸೂಲಿಗೆ ಹೋದವನು ಈಗ ಅರಸೀಕೆರೆಗೆ ಹಿಂತಿರುಗುತ್ತಿದ್ದಾನೆ. ಇಷ್ಟೇ ಅವನ ಮಾತಿನ ತಾತ್ಪರ್ಯ.
ನನ್ನ ಬಗ್ಗೆ ಆತ ಕೇಳಿದ. ನಾನು ನನ್ನ ಊರು ಯಾವುದು ಎಂದು ಹೇಳಿದೆ. ಆದರೆ ಬೆಂಗಳೂರಿಗೆ ಬಂದಿದ್ದು ಕೆಲಸವೊಂದರ ಸಂದರ್ಶನಕ್ಕೆ. ಆದರೆ ನನ್ನ ಪಿಕ್ ಪಾಕೇಟ್ ಅಯ್ತು ಎಂದು ಸುಳ್ಳನ್ನು ಸೃಷ್ಟಿಸಿ ಹೇಳಿದೆ. ಆತ ನನ್ನ ಮಾತನ್ನು ನಂಬಿದನೋ ಬಿಟ್ಟನೋ. ಬೇರೆ ಮಾತು ಆಡಲಿಲ್ಲ.
ನಾವು ಅರಸಿಕೆರೆ ತಲುಪಿದಾಗ ರಾತ್ರಿ ೧೦ ಗಂಟೆ ಆಗಿತ್ತು. ಆತ ಬಸ್ ನಿಲ್ದಾಣದ ಬಳಿ ನನ್ನನ್ನು ಬಿಟ್ಟು ರಾತ್ರಿ ಇಲ್ಲೇ ಮಲಗು. ಬೆಳಿಗ್ಗೆ ಶಿವಮೊಗ್ಗೆಗೆ ಹೋಗುವ ಲಾರಿಗಳು ಸಿಗ್ತವೆ. ಲಾರಿ ಹತ್ತಿ ಶಿವಮೊಗ್ಗೆಗೆ ಹೋಗು ಎಂದು ಸಲಹೆ ನೀಡಿ ಹೊರಟು ಹೋದ.
ನಾನು ಆ ರಾತ್ರಿ ಅರಸೀಕೆರೆಯ ಬಸ್ ನಿಲ್ದಾಣದಲ್ಲಿ ಕಳೆಯಲು ನಿರ್ಧರಿಸಿದೆ. ಹಾಗೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಹಾಕಿದ ಬೇಂಚಿನ ಮೇಲೆ ಮಲಗಿದೆ. ಹೊಟ್ಟೆ ಖಾಲಿಯಾಗಿ ಚುರುಕ್ ಅನ್ನುತ್ತಿದ್ದರೂ ನಡೆದ ಆಯಾಸದಿಂದಾಗಿ ಕಣ್ಣು ಏಳೆಯುತ್ತಿತ್ತು. ನಾನು ಹಾಕಿಕೊಂಡಿದ್ದ ಚಪ್ಪಲಿಯನ್ನು ತೆಗೆದು ಬೆಂಚಿನ ಕೆಳಗಿಟ್ಟು ಅಲ್ಲಿಯೇ ಮಲಗಿ ನಿದ್ರೆ ಮಾಡಿದೆ.
ನಾನು ಕಣ್ಣು ಬಿಟ್ಟಾಗ ಅರಸೀಕೆರೆಯ ಬಸ್ ನಿಲ್ದಾಣದಲ್ಲಿ ಜನರ ಓಡಾಟ ಪ್ರಾರಂಭವಾಗಿತ್ತು. ಎದ್ದು ಸಾರ್ವಜನಿಕ ನಲ್ಲಿಯಲ್ಲಿ ನೀರು ಕುಡಿದೆ. ಮುಖ ತೊಳೆದುಕೊಂಡೆ. ತಕ್ಷಣ ಚಪ್ಪಲಿಯ ನೆನಪಾಯಿತು. ಆ ಕಲ್ಲು ಬೆಂಚಿನ ಕೆಳಗೆ ನೋಡಿದರೆ ನನ್ನ ಚಪ್ಪಲಿ ಇರಲಿಲ್ಲ. ಅದನ್ನು ಯಾರು ಕದ್ದೊಯ್ದಿದ್ದರು. ನನ್ನ ಚಪ್ಪಲಿ ಕಳ್ಳತನವಾಗಿದೆ ಎಂದು ಯಾರನ್ನು ಕೇಳಲಿ ? ಜೊತೆಗೆ ಚಪ್ಪಲಿ ಇಲ್ಲದೇ ಟಾರು ರಸ್ತೆಯಲ್ಲಿ ನಡೆಯುವುದು ಹೇಗೆ ?
ಆದರೂ ನಾನು ನಡೆಯಲೇಬೇಕಿತ್ತು. ಬರೀ ಕಾಲಿನಲ್ಲಿ ಶಿವಮೊಗ್ಗ ರಸ್ತೆಯಲ್ಲಿ ನಡೆಯತೊಡಗಿದೆ. ಹಸಿವೆಯಾಗಿ ಹೊಟ್ಟೆ ತೊಳಸಿದಂತಾಗುತ್ತಿತ್ತು. ಕಾಲು ಸುಡುತ್ತಿತ್ತು. ಆದರೂ ನಡೆಯದೇ ನನಗೆ ಬೇರೆ ದಾರಿ ಇರಲಿಲ್ಲ.

Sunday, January 29, 2012

ನಾನೂ ಮನೆ ಬಿಟ್ಟು ಓಡಿ ಬಂದಿದ್ದೆ....!





ನನಗೆ ಒಂದು ಕಾಲದಲ್ಲಿ ತಿರುಗುವ ಹುಚ್ಚು ಹಿಡಿದಿತ್ತು. ಈ ಹುಚ್ಚಿನಿಂದಾಗಿ ನಾನು ಭಾರತದ ಉದ್ದಗಲಕ್ಕೆ ಒಡಾಡಿದ್ದೇನೆ. ಹಣ ಖಾಲಿಯಾದ ಮೇಲೆ ಈ ತಿರುಗಾಟದಿಂದ ನಾನು ಹಿಂದಕ್ಕೆ ಬರುತ್ತಿದ್ದುದು ಮಾಮೂಲು. ನಾನು ಈ ತಿರುಗಾಟಕ್ಕೆ ಮುನ್ನುಡಿ ಬರೆದಿದ್ದು ನಾನು ಹೈಸ್ಕೂಲಿಗೆ ಹೋಗುತ್ತಿದ್ದಾಗ. ಆಗ ನನಗೆ ವಿಪಿರೀತ ನಾಟಕದ ಹುಚ್ಚು. ಒಬ್ಬ ಮಹಾನ್ ನಟನಾಗಬೇಕು ಎಂಬುದು ನನ್ನ ಬದುಕಿನ ಗುರಿಯಾಗಿತ್ತು. ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ನಾನು ನನ್ನ ನಟನಾ ಸಾಮರ್ಥ್ಯದಿಂದ ಹಲವು ಭಾರಿ ಪ್ರಶಸ್ತಿ ಪಾರಿತೋಷಕವನ್ನು ಪಡೆದಿದ್ದೂ ಉಂಟು.
ನಟನೆ ಮತ್ತು ಸಿನೆಮಾ ನನ್ನನ್ನು ಸೆಳೆದಿದ್ದ ಆ ದಿನಗಳಲ್ಲಿ ಬೆಂಗಳೂರಿಗೆ ಹೋಗಿ ನಟನಾಗಬೇಕು ಎಂದು ಮನಸ್ಸಿನಲ್ಲೇ ಅಂದುಕೊಂಡಿದ್ದು. ಅದೊಂದು ದಿನ. ಬಹುಶಃ ೧೯೭೪ ಇಸವಿ ದಿಸೆಂಬರ್ ತಿಂಗಳು ಇರಬೇಕು. ಅಂದು ಮನೆಯಲ್ಲಿ ಹಸ್ಕೂಲ್ ನ ಫೀ ಕಟ್ಟಲೆಂದು ಅಪ್ಪ ಕೊಟ್ಟ ಹದಿನೆಂಟು ರೂಪಾಯಿ ನನ್ನ ಕಿಸೆಯಲ್ಲಿ ಇತ್ತು. ನನಗೆ ಆ ಹದಿನೆಂಟು ರೂಪಾಯಿ ಭಾರಿ ಮೊತ್ತವಾಗಿ ಕಂಡಿತ್ತು. ಈ ಹಣವನ್ನು ತೆಗೆದುಕೊಂಡು ಬೆಂಗಳೂರು ಬಸ್ ಹತ್ತುವ ತೀರ್ಮಾನ ತೆಗೆದುಕೊಂಡೆ. ಹೈಸ್ಕೂಲಿಗೆ ಬಂದವನು ಹತ್ತು ಗಂಟೆಯ ಸಿರ್ಸಿ ಬೆಂಗಳೂರು ಬಸ್ ಹತ್ತಿ ಬಿಟ್ಟೆ. ಆ ಕೆಂಪು ಡಬ್ಬಿ ಬಸ್ಸಿನಲ್ಲಿ ಆಗ ಬೆಂಗಳೂರಿಗೆ ೧೧ ರೂಪಾಯಿ ಚಾರ್ಜ್. ಬಸ್ ಹತ್ತಿ ಟಿಕೆಟ್ ತೆಗೆದುಕೊಂಡ ಮೇಲೆ ನನ್ನ ಕೈಯಲ್ಲಿ ಉಳಿದಿದ್ದು ೭ ರೂಪಾಯಿಗಳು. ಉತ್ತರ ಕನ್ನಡ ಮತ್ತು ಹುಬ್ಬಳ್ಳಿಯನ್ನು ಬಿಟ್ಟು ಬೇರೆ ಊರುಗಳನ್ನೇ ಆ ದಿನಗಳಲ್ಲಿ ನಾನು ನೋಡಿರಲಿಲ್ಲ. ಹುಬ್ಬಳ್ಳಿಗೆ ಹೋಗಿದ್ದು ನನ್ನ ಅಪ್ಪನಿಗೆ ಕೀಡ್ನಿ ಅಪರೇಷನ್ ಆಗಿದ್ದರಿಂದ ಅಮ್ಮನ ಜೊತೆಗೆ ಹೋಗಿದ್ದು. ಒಂದು ವಾರ ಆಸ್ಪತ್ರೆಯಲ್ಲಿ ಇದ್ದು ಬಂದಿದ್ದು ಬಿಟ್ಟರೆ ಹುಬ್ಬಳ್ಳಿಯನ್ನು ಸರಿಯಾಗಿ ನೋದಿರಲಿಲ್ಲ.
ಇನ್ನು ನಾನು ನೋಡಿದ್ದ ಊರುಗಳೆಂದರೆ ಸಿರ್ಸಿ, ಸಾಗರ, ಜೋಗ್ ಫಾಲ್ಸ್ ಮಾತ್ರ.
ನಮ್ಮೂರಿನ ಕಾಡು, ನದಿ ಬೆಟ್ಟ ಗುಡ್ಡಗಳು, ಹೆಚ್ಚೆಂದರೆ ಅಕ್ಕ ಪಕ್ಕದ ಗ್ರಾಮಗಳನ್ನು ಮಾತ್ರ ನೋಡಿದ್ದ ನಾನು ಆಗ ನಟನಾಗುವುದಕ್ಕಾಗಿ ಬೆಂಗಳೂರು ಕನಸುಕಂಡು ಅದನ್ನು ಸಾಕಾರಗೊಳಿಸಲು ಯಾರಿಗೂ ಹೇಳದೇ ಬೆಂಗಳೂರು ಬಸ್ ಹತ್ತಿಬಿಟ್ಟಿದ್ದೆ !
ಬಸ್ ಸಿದ್ದಾಪುರದಿಂದ ಸಾಗರದ ಮಾರ್ಗವಾಗಿ ಶಿವಮೊಗ್ಗ ತಲುಪವಷ್ಟರಲ್ಲಿ ನಾನು ಮಹಾನ್ ನಟನಾದಂತೆ ಕನಸು ಕಾಣತೊಡಗಿದ್ದೆ. ಆಗಲೇ ರಾಜಕುಮಾರ್, ಉದಯಕುಮಾರ್ ಅವರ ಸಾಲಿನಲ್ಲಿ ನಾನು ಬಂದು ನಿಂತಂತೆ ನನಗೆ ಅನ್ನಿಸಿಬಿಟ್ಟಿತ್ತು. ರಾಜಕುಮಾರ್ ಮತ್ತು ಉದಯಕುಮಾರ್ ಅವರ ಬಹುತೇಕ ಸಿನೆಮಾಗಳನ್ನು ಕದ್ದು ನೋಡಿದ್ದ ನಾನು ಅವರ ಮ್ಯಾನರಿಸಂ ಗಳನ್ನು ಅನುಕರಿಸಲು ಪ್ರಾರಂಭಿಸಿ ಹಲವು ಕಾಲವಾಗಿತ್ತು. ಜೊತೆಗೆ ನನ್ನನ್ನು ಅತಿಯಾಗಿ ಕಾಡಿದ ಹಿಂದಿ ಚಿತ್ರ ನಟ ಎಂದರೆ ರಾಜೇಶ್ ಖನ್ನಾ. ರಾಜೇಶ್ ಖನ್ನಾ ಆ ದಿನಗಳಲ್ಲಿ ತನ್ನ ಹಲವು ಚಿತ್ರಗಳಲ್ಲಿ ಕುತ್ತಿಗೆ ಮುಚ್ಚುವ ಶರ್ಟ್ ಧರಿಸುತ್ತಿದ್ದ. ನಾನು ಅದೇ ರೀತಿಯ ಶರ್ಟ್ ಹಾಕಬೇಕೆಂದು ನನ್ನೂರಿನ ಟೇಲರ್ ಭಟ್ಟಿಯನ್ನು ರಾಜೇಶ್ ಖನ್ನಾನ ಹಾಥಿ ಮೇರೆ ಸಾಥಿ ಸಿನೆಮಾಕ್ಕೆ ಕರೆದುಕೊಂಡು ಹೋಗಿ ತೋರಿಸಿದ್ದೆ. ಆತ ನನ್ನ ಖರ್ಚಿನಲ್ಲಿ ಸಿನೆಮಾ ನೋಡಿ ಬಿಡಿ ಇದೇ ರೀತಿಯ ಶರ್ಟ್ ಹೊಲಿದುಕೊಡ್ತೀನಿ ಅಂತ ಭರವಸೆಯನ್ನು ನೀಡಿ ಬಿಟ್ಟಿದ್ದ. ನಾನೇ ಹಂಡ ಬಂಡದ ಬಟ್ಟೆಯನ್ನು ಖರೀದಿ ಮಾಡಿ ಕೊಟ್ಟು ಶರ್ಟಿಗಾಗಿ ಕಾದು ಕುಳಿತೆ. ಒಂದು ವಾರದ ನಂತರ ಶರ್ಟ್ ಸಿಕ್ಕಾಗ ಸ್ವರ್ಗ ಮೂರೇ ಗೇಣು. ಆದರೆ ಆತ ಕುತ್ತಿಗೆಯನ್ನು ಮುಚ್ಚಬೇಕಾದ ಬಟ್ಟೆಯ ಭಾಗವನ್ನು ಸ್ವಲ್ಪ್ ಜಾಸ್ತಿ ಇಟ್ಟು ಬಿಟ್ಟಿದ್ದ. ಹೀಗಾಗಿ ಅದು ಗಡ್ಡದ ವರೆಗೆ ಬಂದು ನಿಂತು ಬಿಡುತ್ತಿತ್ತು. ಜೊತೆಗೆ ಕುತ್ತಿಗೆಯ ಎಡ ಭಾಗದಲ್ಲಿ ಇರಿಸಿದ್ದ ಬಟನ್ ಗಳು ಅಗಾಗ ಕುತ್ತಿಗೆಯನ್ನು ಕಚ್ಚುತ್ತ ಕಿರಿ ಕಿರಿಯನ್ನು ಉಂಟು ಮಾಡುತ್ತಿದ್ದವು. ಈ ಬಗ್ಗೆ ಅವನಿಗೆ ಹೇಳಿದಾಗ ಇದು ರಾಜೇಶ್ ಖನ್ನಾನ ಶರ್ಟಿನ ತದ್ರೂಪ ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿದ್ದ. ನಾನೂ ಸಹ ಇದನ್ನು ದೊಡ್ದ ವಿಚಾರ ಮಾಡಲು ಬಯಸದೇ ಶರ್ಟನ್ನು ಪ್ರೀತಿಯಿಂದ ತೊಟ್ಟುಕೊಂಡು ಓಡಾಡ ತೊಡಗಿದೆ. ಊರಿನ ಜನರೆಲ್ಲ ನನ್ನನ್ನು ಉತ್ತರ ಕನ್ನಡ ರಾಜೇಶ್ ಖನ್ನಾ ಎಂದು ಕರೆದು ನನ್ನನ್ನು ಪುಳಕಿತರನ್ನಾಗಿ ಮಾಡುತ್ತಿದ್ದರು. ಆದರೆ ಹಿಂದಿನಿಂದ ಭಟ್ಟರ ಮಗಂದು ಜಾಸ್ತಿಯಾಯ್ತು ಎಂದು ಹೇಳಿಕೊಂಡು ಓಡಾಡುತ್ತಿದ್ದರು.
ಇಂತಹ ಇತಿಹಾಸದ ನಾನು ನಟನಾಗಬೇಕು ಎಂದು ಬೆಂಗಳೂರಿಗೆ ಹೊರಟು ಬಿಟ್ಟಿದ್ದೆ, ಆ ಕೆಂಪು ಡಬ್ಬಿ ಬಸ್ಸು ಕಂಡ ಕಂಡಲ್ಲಿ ನಿಲ್ಲುತ್ತ ಬೆಂಗಳೂರಿಗೆ ಬಂದು ತಲುಪಿದಾಗ ರಾತ್ರಿ ಹತ್ತು ಗಂಟೆ ದಾಟಿ ಹೋಗಿತ್ತು. ಇಡೀ ನಗರ ವಿದ್ಯುತ್ ದೀಪದಿಂದ ಶೃಂಗರಿಸಿಕೊಂಡು ನಿಂತಿತ್ತು. ಹೈಸ್ಕೂಲಿನ ಬಿಳಿ ಅಂಗಿ ಖಾಕಿ ಚೆಡ್ದಿ ಹಾಕಿಕೊಂಡು ಬಸ್ ನಿಲ್ದಾಣದಲ್ಲಿ ಇಳಿದ ನನಗೆ ಮುಂದೇನು ಎಂಬುದು ಗೊತ್ತಿರಲಿಲ್ಲ. ಆದರೆ ಹೊರ ಊರಿಗೆ ಹೋದಾಗ ಹೊಟೇಲ್ಲಿನಲ್ಲಿ ಉಳಿದುಕೊಳ್ಳಬೇಕು ಎಂದು ನಾನು ನಂಬಿಕೊಂಡಿದ್ದೆ. ಆದರೆ ಕೈಯಲ್ಲಿ ಯಾವ ಬ್ಯಾಗು ಇಲ್ಲದೇ ರಸ್ತೆ ಬದಿಯ ಪ್ಯಾದೆಯಂತೆ ಇರುವ ನನಗೆ ರೂಮು ಕೊಡುವವರು ಯಾರು ? ಜೊತೆಗೆ ಕೈಯಲ್ಲಿ ಏಳು ರೂಪಾಯಿ ಇಟ್ಟುಕೊಂಡವ ಬಾದಿಗೆ ರೂಮು ಪಡೆಯುವುದು ಸಾಧ್ಯವೆ ? ಈ ಪ್ರಶ್ನೆಗಳು ನನ್ನನ್ನು ಕಾಡಲೇ ಇಲ್ಲ. ನಾನು ಮೆಜೆಸ್ಟಿಕ್ ನ ಹಲವು ಹೋಟೇಲ್ ಗಳನ್ನು ಸುತ್ತಿದೆ. ರೂಮು ಬೇಕಿತ್ತು ಎಂದು ಹೇಳಿದಾಗ ಅವರೆಲ್ಲ ನನ್ನನ್ನು ನೋಡಿ ನಕ್ಕು ರೂಮಿಲ್ಲ ಎಂದು ಹಿಂದಕ್ಕೆ ಕಳುಹಿಸಿದರು. ಹೀಗೆ ಸುತ್ತುತ್ತಾ ಬಳೇ ಪೆಟೆಯ ಹೋಟೆಲ್ ಒಂದರ ಬಳಿ ನಿಂತೆ. ಯಥಾ ಪ್ರಕಾರ ಅದೇ ಪ್ರಶ್ನೆ: ರೂಮು ಇದೆಯಾ ?
ಅಲ್ಲಿದ್ದ ವ್ಯಕ್ತಿಯೊಬ್ಬ ನನ್ನನ್ನು ನೋಡಿ ಹೇಳಿದ. ನೋಡು ಅಲ್ಲಿ ರೈಲ್ವೆ ಸೇಷನ್ ಇದೆ. ನಿನ್ನಂತವರಿಗೆ ಅದೇ ಹೋಟೆಲ್. ಅಲ್ಲಿ ಹೋಗು ಮಲಗು.
ನನಗೆ ಬೇರೆ ದಾರಿ ಇರಲಿಲ್ಲ. ಕಣ್ಣು ಎಳೆಯುತ್ತಿತ್ತು. ಸರಿ ಎಂದು ರೈಲ್ವೆ ಸ್ಟೆಷನ್ ಗೆ ಬಂದು ಮಲಗಿದೆ. ಬೆಳಿಗ್ಗೆ ಎದ್ದಾಗ ನನ್ನ ಎದುರು ಬೆಂಗಳೂರು ತೆರೆದು ನಿಂತಿತ್ತು. ಆದರೆ ನನ್ನ ಕಿಸೆಯಲ್ಲಿ ಇದ್ದುದು ಕೇವಲ ೭ ರೂಪಾಯಿಗಳು ಮಾತ್ರ. ಈ ಏಳು ರೂಪಾಯಿ ಮೂಲ ಬಂಡವಾಳದೊಂದಿಗೆ ನಾನು ನಟನಾಗಲು ಹೊರಟಿದ್ದೆ.
ರೈಲ್ವೆ ಸ್ಟೇಷನನ್ನಿನ ಪಕ್ಕದ ತಳ್ಳು ಗಾಡಿಯಲ್ಲಿ ೮೦ ಪೈಸೆ ನೀಡಿ ಎರಡು ಇಡ್ಲಿ ತಿಂದಾಗ ಹೊಟ್ಟೆ ತುಂಬಿ ಸಂತೃಪ್ತಿಯ ಭಾವ. ಅಲ್ಲಿಯವರೆಗೆ ಮನೆಯಲ್ಲಿ ಸುದಿಷ್ಟ ತಿಂಡಿ ಭೋಜನ ಮಾಡುತ್ತಲೇ ಬೆಳೆದ ನನಗೆ ಪ್ರಥಮ ಬಾರಿ ಹಸಿವು ಎಂದರೇನು ಎಂಬುದು ತಿಳಿದಿತ್ತು. ಜೊತೆಗೆ ಹಸಿವನ್ನು ತುಂಬಿಸಿಕೊಳ್ಳಲು ಪಡಬೇಕಾದ ಕಷ್ಟ ಏನು ಎಂಬುದು ಅರ್ಥವಾಗಿತ್ತು. ಆದರೂ ನಟನಾಗಬೇಕು ಎಂಬ ನನ್ನ ಕನಸು ಸತ್ತಿರಲಿಲ್ಲ.
ರೈಲ್ವೆ ಸ್ಟೇಷನ್ನಿನ ಪಕ್ಕದಲ್ಲಿ ತಿಂಡಿ ತಿಂದವನು ಸಿನೆಮಾ ಸೇರುವುದಕ್ಕೆ ಮೊದಲು ಯಾವುದಾದರೂ ನಾಟಕ ಕಂಪೆನಿ ಸೇರಿದರೆ ಒಳ್ಳೆಯದು ಎಂಬ ಭಾವನೆ ಬಂತು. ನಟನೆಯಲ್ಲಿ ತರಬೇತಿ ಪಡೆದ ಮೇಲೆ ಚಿತ್ರರಂಗ ಕೈಬೀಸಿ ಕರೆಯುತ್ತಿದೆ ಎಂದು ಯೋಚಿಸುತ್ತಿದ್ದವನಿಗೆ ಪಕ್ಕದಲ್ಲೇ ಕಂಡಿದ್ದು ಮಾಸ್ಟರ್ ಹಿರಣ್ಣಯ್ಯ ಅವರ ನಾಟಕ ಮಂಡಳಿಯ ಬೋರ್ಡು. ಆಗ ಅಲ್ಲಿ ಸುಭಾಷನಗರ ಸಿಟಿ ಬಸ್ ನಿಲ್ದಾಣ ಇರಲಿಲ್ಲ. ಸಿಟಿ ಬಸ್ ಗಳೆಲ್ಲ ಅಲ್ಲಿದ್ದ ಮೈದಾನದಂತೆ ಕಾಣುತ್ತಿದ್ದ ಕೆರೆಯ ಸುತ್ತಲೂ ರಸ್ತೆಯ ಪಕ್ಕದಲ್ಲಿ ಬಸ್ ಗಳನ್ನ ನಿಲ್ಲಿಸುತ್ತಿದ್ದರು. ಈ ಮೈದಾನದಲ್ಲಿ ಟೆಂಟ್ ಹಾಕಿದ್ದು ಹಿರಣ್ಣಯ್ಯ ಮಿತ್ರ ಮಂಡಳಿ.
ಸರಿ ಎಂದು ಹಿರಣ್ಣಯ್ಯ ಮಿತ್ರ ಮಂಡಳಿಯ ಟೆಂಟ್ ಪ್ರವೇಶಿಸಿದೆ. ಅಲ್ಲಿ ಮಾಸ್ಟರ್ ಹಿರಣ್ಣಯ್ಯ ಇರಲಿಲ್ಲ. ಅಲ್ಲಿದ್ದ ಹಿರಿಯರೊಬ್ಬರನ್ನು ಕಂಡು ನಾನು ನಟನಾಗಬೇಕು ಎಂದೆ.
ಅವರು ನನ್ನನ್ನು ಕಾಲಿನಿಂದ ತಲೆಯ ವರೆಗೆ ನೋಡಿ ಮನೆ ಬಿಟ್ಟು ಓಡಿ ಬಂದಿದ್ದೀಯಾ ? ಎಂದು ಪ್ರಶ್ನಿಸಿದರು. ಹೌದು ಎಂದು ತಲೆ ಆಡಿಸಿದೆ.
ಮೊದಲು ಮನೆಗೆ ಹಿಂತಿರುಗಿ ಹೋಗು. ನಿನ್ನ ವಿದ್ಯಾಭ್ಯಾಸವನ್ನು ಮುಗಿಸು. ನಂತರ ನಟನಾಗು ಎಂದು ಬುದ್ದಿ ಮಾತು ಹೇಳಿದರು. ಹಾಗೆ ತಿಂಡಿ ತಿಂದಿದ್ದೀಯಾ ತಾನೆ ಎಂದು ವಿಚಾರಿಸಿಕೊಂಡರು. ಮತ್ತೆ ಅವರು ಶಿಕ್ಷಣದ ಮಹತ್ವವನ್ನು ವಿವರಿಸಿದರು. ಅವರ ಮಾತುಗಳನ್ನು ಕೇಳಿದ ಮೇಲೆ ಯಾಕೋ ನಟನಾಗಬೇಕು ಎಂಬ ನನ್ನ ಆಸೆ ಒಳಗೆ ಸಾಯತೊಡಗಿತು.
ಅವರ ಹೆಸರನ್ನು ಕೇಳದೆ ಹಾಗೆ ತಲೆ ತಗ್ಗಿಸಿ ಅಲ್ಲಿಂದ ಹೊರಟೆ. ಮುಂದೇನು ಎಂಬ ಪ್ರಶ್ನೆ ಕಾಡುತ್ತಿತ್ತು. ಊರಿಗೆ ಹಿಂತಿರುಗಿ ಹೋಗಲು ಏನೋ ಮುಜುಗರ. ಹಾಗೆ ಇಲ್ಲಿ ಬದುಕುವುದು ಹೇಗೆ ಎಂಬುದು ಗೊತ್ತಿಲ್ಲ. ಕೈಯಲ್ಲಿ ಇದ್ದುದು ೫ ರೂಪಾಯಿ,
ಅಲ್ಲಿಂದ ಹೊರಟು ಮತ್ತೆ ಬಳೆ ಪೇಟೆಯ ರಾತ್ರಿ ನೋಡಿದ್ದ ಹೋಟೇಲ್ಲಿನ ಎದುರು ಬಂದು ನಿಂತಿದ್ದೆ. ಇಲ್ಲಿಯೇ ಕೆಲಸ ಕೇಳಬೇಕು ಎಂದುಕೊಂಡು ಮೆನೇಜರ್ ಎದುರು ನಿಂತಿ ಕೇಳಿದ್ದು ಏನಾದರೂ ಕೆಲಸ ಇದೆಯಾ ? ಅಂತ.
ಆತ ನನ್ನ ಮುಖವನ್ನು ಒಮ್ಮೆ ದಿಟ್ಟಿಸಿದ. ಅವನದು ಅದೇ ಹಳೆಯ ಪ್ರಶ್ನೆ: ಮನೆ ಬಿಟ್ಟಿ ಓಡಿ ಬಂದೀದಿಯಾ ?
ನೋಡು ನೀನು ಯಾವುದೋ ಒಳ್ಳೆ ಕುಟುಂಬದಿಂದ ಬಂದಂತೆ ಕಾಣ್ತೀಯಾ ? ಸುಮ್ಮನೆ ಮನೆಗೆ ಹಿಂತಿರುಗಿ ಹೋಗು. ಹೊಟೆಲ್ ಕೆಲಸ ನಿನ್ನಂತವರಿಗಲ್ಲ ಎಂಭ ಬುದ್ದಿ ಮಾತನ್ನು ಆತ ಹೇಳಿದ. ಅವನ ಮಾತನ್ನು ಕೇಳಿಸಿಕೊಂಡು ಅಲ್ಲಿಂದ ಹೊರಟೆ.
ನೇರವಾಗಿ ಶಾಂತಲಾ ಸಿಲ್ಕ್ ಹೌಸ್ ನ ಪಕ್ಕದಲ್ಲಿದ್ದ ಸಣ್ನ ಪಾರ್ಕ್ ಗೆ ಬಂದು ಆಕಾಶ ನೋಡುತ್ತ ಮಲಗಿದೆ. ಸಾಧಾರಣವಾಗಿ ಮೊದಲಿನಿಂದಲೂ ನನಗೆ ನಿದ್ರೆಯ ಸಮಸ್ಯೆಯೇ ಇಲ್ಲ. ಎಲ್ಲಿ ಬೇಕಾದರೂ ಮಲಗಿ ನಿದ್ರೆ ಮಾಡುವವನು ನಾನು. ಅಲ್ಲಿಯೂ ಹಾಗೆ ಆಯ್ತು. ಮಲಗಿದ ತಕ್ಷಣ ಗಾಢ ನಿದ್ರೆಗೆ ಜಾರಿ ಬಿಟ್ಟೆ.
ಕಣ್ಣು ಬಿಟ್ಟು ನೋಡಿದಾಗ ರಾತ್ರಿ ೮ ಗಂಟೆ ದಾಟಿತ್ತು. ಹೊಟ್ಟೆ ಚುರು ಚುರು ಅನ್ನುತ್ತಿತ್ತು. ಏನಾದರೂ ತಿನ್ನಬೇಕು ಎಂದು ಅನ್ನಿಸಿದರೂ ಕೈಯಲ್ಲಿರುವ ಹಣ ಖರ್ಚಾಗುತ್ತದೆ ಎಂಬ ಭಯ.
ಅಲ್ಲಿಂದ ಮತ್ತೆ ರೈಲ್ವೆ ಸ್ಟೇಷನ್ನಿಗೆ ತಿರುಗಿ ಬಂದೆ. ಅಲ್ಲಿರುವ ಚಿತ್ರ ವಿಚಿತ್ರ ಜನರನ್ನು ನೋಡುತ್ತ ಬೇಂಚಿನ ಮೇಲೆ ಹಾಗೆ ಕುಳಿತೆ. ಹಸಿವನ್ನು ಹೋಗಲಾಡಿಸಲು ಹೊಟ್ಟೆ ತುಂಬಾ ನೀರು ಕುಡಿದೆ.
ರೈಲು ಬರುತ್ತಿತ್ತು ಹೋಗುತ್ತಿತ್ತು. ಜನ ಎಲ್ಲಿಗೂ ಹೋಗಿ ಬರುವ ತರಾತುರಿಯಲ್ಲಿದ್ದರು. ಬಂದು ಹೋಗುವವರ ಮುಖಗಳನ್ನು ನೋಡುತ್ತ ಹಾಗೆ ಕುಳಿತಿದ್ದೆ. ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ರೈಲ್ವೆ ನಿಲ್ದಾಣದಲ್ಲಿ ಜನ ಜಂಗುಳಿ ಕಡಿಮೆಯಾಗಿತ್ತು. ರೈಲ್ವೆ ನಿಲ್ದಾಣದ ಮೂಲೆಯೊಂದರಲ್ಲಿ ಹಾಗೆ ಮಲಗಿ ನಿದ್ರೆ ಮಾಡಿದೆ. ಅಲ್ಲಿ ನಿದ್ರೆ ಮಾಡುತ್ತ ಮಲಗಿದ್ದ ಹತ್ತಾರು ಅನಾಥರ ನಡುವೆ ನಾನು ಒಬ್ಬನಾಗಿದ್ದೆ. ಆ ಗದ್ದಲದ ನಡುವೆಯೇ ನನಗೆ ಯಾವಾಗ ನಿದ್ರೆ ಬಂತೋ ತಿಳಿಯಲಿಲ್ಲ.